ಕೆಆರ್‌ಎಸ್‌ ಉದ್ಯಾನವನ ಡಿಸ್ನಿಲ್ಯಾಂಡ್  ಮಾದರಿ ಅಭಿವೃದ್ಧಿಗೆ ಸರ್ಕಾರ ನಿರ್ಧಾರ
ಮೈಸೂರು

ಕೆಆರ್‌ಎಸ್‌ ಉದ್ಯಾನವನ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೆ ಸರ್ಕಾರ ನಿರ್ಧಾರ

November 15, 2018

ಬೆಂಗಳೂರು: ವಿಶ್ವ ವಿಖ್ಯಾತ ಕೆಆರ್‌ಎಸ್‌ ಉದ್ಯಾನವನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿದೆ.

125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರ ಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟ್ಯಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವ ಕುಮಾರ್ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪು-ರೇಷೆ ಬಗ್ಗೆ ಕೂಲಂಕುಷ ಚರ್ಚೆ ನಡೆಸಲಾಯಿತು. ಜೈಪುರದ ಸಿನ್ಸ ಯರ್ ಆರ್ಕಿಟೆಕ್ಟ್ ಕನ್ಸಲ್ಟೆಂಟ್ ಸಂಸ್ಥೆ ನೀಡಿದ ಪ್ರಾತ್ಯಕ್ಷಿಕೆ ಆಧರಿಸಿ ಸಚಿವರು ಯೋಜನೆ ಕುರಿತು ಮತ್ತಷ್ಟು ಸಲಹೆ, ಸೂಚನೆಗಳನ್ನು ನೀಡಿದರು. ಈಗಿನ ಪಾರಂಪರಿಕ ತಾಣದ ಮೂಲಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾ ವನವನ್ನು ವಿಶ್ವಪ್ರವಾಸಿ ತಾಣಗಳಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಮೂಲ ಸಂಕಲ್ಪವಾಗಿರಬೇಕು ಎಂದು ಒತ್ತಿ ಹೇಳಿದರು. ಇಂದಿನ ಸಭೆಯಲ್ಲಿ ನಡೆದ ವಿಸ್ತೃತ ಚರ್ಚೆ ಪ್ರಕಾರ ಯೋಜನೆಯ ಒಟ್ಟು ವೆಚ್ಚ 1200 ಕೋಟಿ ರೂಪಾಯಿಗಳು. ಜಾಗತಿಕ ಟೆಂಡರ್ ಮೂಲಕ ವಿಶ್ವ ಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಿ ಕೊಡಲಾಗುವುದು. ಈ ಬಂಡವಾಳ ಹೂಡಲು ಎನ್‍ಆರ್‍ಐಗಳು ಮುಂದೆ ಬಂದಿದ್ದು, ಸ್ಥಳಾವ ಕಾಶ ಬಿಟ್ಟು ರಾಜ್ಯ ಸರಕಾರ ಒಂದು ಪೈಸೆ ಬಂಡವಾಳ ಹೂಡುವುದಿಲ್ಲ. ಯೋಜನೆಗೆ ಅವಶ್ಯವಿರುವ ಭೂಮಿಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ನೀಡಲಾಗುವುದು. ಟೆಂಡರ್‍ನಲ್ಲಿ ಭಾಗ ವಹಿಸುವ ಸಂಸ್ಥೆ ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿದ್ದು, ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರಬೇಕು.

ಈಗಿರುವ ದೋಣಿ ವಿಹಾರ ಸರೋ ವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ, ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ಅಸ್ತಿತ್ವಕ್ಕೆ ಬರಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದೆ. ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ. ಬೃಂದಾವನ ಕಡೆಯಿಂದ ಇದು ಅಣೆಕಟ್ಟೆಯ ಎತ್ತರವನ್ನು ದಾಟಲಿದೆ. ಅದೇ ರೀತಿ ಗೋಪುರವುಳ್ಳ ಗಾಜಿನಮನೆ ಕೂಡ. ಈ ಎರಡೂ ಕಟ್ಟಡಗಳಿಂದ ಅಣೆ ಕಟ್ಟೆಯ ವಿಹಂಗಮ ನೋಟ ಗೋಚರ ವಾಗಲಿದೆ.

ಮ್ಯೂಸಿಯಂನಲ್ಲಿ ಕೆಆರ್‌ಎಸ್‌, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ. ಈ ಯೋಜನೆಯಿಂದ ಜಲಾಶಯಕ್ಕಾಗಲೀ, ನದಿ ಪಾತ್ರಕ್ಕಾಗಲೀ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಮೈಸೂರು ಹಾಗೂ ಮಂಡ್ಯದ ಕೆಆರ್‌ಎಸ್‌ ಈಗಾಗಲೇ ಜಗತ್ಪ್ರಸಿದ್ಧವಾಗಿವೆ. ಇವುಗಳನ್ನು ವಿಶ್ವದಲ್ಲೇ ಅಗ್ರಗಣ್ಯ ಪ್ರವಾಸಿ ಆಕರ್ಷಣೆಯ ತಾಣವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶ. ಈಗ ಬೃಂದಾವನದಿಂದ ರಾಜ್ಯ ಸರಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ ಕೇವಲ ಆರು ಕೋಟಿ ರೂಪಾಯಿ. ಹೊಸ ಯೋಜನೆ ಪ್ರಕಾರ ವಾರ್ಷಿಕ 300 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯಲಿದ್ದು, ಸರಕಾರಕ್ಕೆ 30 ಕೋಟಿ ರೂಪಾಯಿ ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನಾ ವರದಿ ಹಾಗೂ ಒಪ್ಪಂದ ಕುರಿತು ಇದೇ ತಿಂಗಳು 20 ರಂದು ಕಾವೇರಿ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಮಿತಿ ಸಭೆ ಅಂತಿಮಗೊಳಿಸಲಿದ್ದು, ನಂತರ ಕ್ರಮವಾಗಿ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ, ಸರಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೂಲಂಕುಷ ಪರಿಶೀಲನೆ ನಡೆಯಲಿದೆ. ನಂತರ ಸಚಿವ ಸಂಪುಟ ಸಭೆ ಜಾಗತಿಕ ಟೆಂಡರ್ ಕುರಿತು ನಿರ್ಣಯ ಕೈಗೊಳ್ಳಲಿದೆ.

ಇಂದಿನ ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಎಸ್. ಸುಬ್ರಹ್ಮಣ್ಯ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಜೈಪ್ರಕಾಶ್, ಪ್ರವಾಸೋದ್ಯಮ ಕಾರ್ಯದರ್ಶಿ ಅನಿಲ್ ಕುಮಾರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್. ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

Translate »