ಮಹಾ ರಥೋತ್ಸವ: ಖಜಾನೆಯಿಂದ ದೇಗುಲಕ್ಕೆ ಆಭರಣ
ಹಾಸನ

ಮಹಾ ರಥೋತ್ಸವ: ಖಜಾನೆಯಿಂದ ದೇಗುಲಕ್ಕೆ ಆಭರಣ

July 9, 2019

ಅಲಂಕೃತ ಎತ್ತಿನ ಗಾಡಿಯಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಅರಸೀಕೆರೆ, ಜು.8- ನಗರದ ಖಜಾನೆಯಲ್ಲಿದ್ದ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವರ ಆಭರಣಗಳನ್ನು ಮಹಾರಥೋತ್ಸವ ಪ್ರಯುಕ್ತ ಸೋಮವಾರ ಹೊರತೆಗೆದಿದ್ದು, ಅಲಂಕೃತ ಎತ್ತಿನ ಗಾಡಿಯಲ್ಲಿ ಸಾಂಪ್ರದಾಯಿಕವಾಗಿ ಶ್ರೀಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.

ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಡೆಯುವ ಜಾತ್ರಾ ಮಹೋತ್ಸವ ವೇಳೆ ದೇವರಿಗೆ ಅಮೂಲ್ಯ ಆಭರಣಗಳಿಂದ ಅಲಂಕರಿಸಲಾಗುತ್ತದೆ. ತಹಸಿಲ್ದಾರ್ ಸಂತೋಷ್ ಕುಮಾರ್ ಅವರು ದೇವರ ಆಭರಣಗಳನ್ನು ಜಾತ್ರಾ ಸಮಿತಿ ಪದಾಧಿಕಾರಿ ಗಳಿಗೆ ಸೋಮವಾರ ಹಸ್ತಾಂತರಿಸುವ ಮೂಲಕ ವಿಜೃಂಭಣೆಯ ಜಾತ್ರಾ ಮಹೋತ್ಸವದ ಮೊದಲ ಕಾರ್ಯ ನೆರವೇರಿಸಿದರು.

ಪೊಲೀಸ್ ರಕ್ಷಣೆಯಲ್ಲಿ ಆಭರಣಗಳನ್ನು ಕೊಂಡೊಯ್ದ ಸಮಿತಿಯವರು, ಅಲಂಕೃತ ಎತ್ತಿನ ಗಾಡಿಯಲ್ಲಿ ಮಂಗಳ ವಾದ್ಯಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ, ಶಿರಸ್ತೆದಾರ್ ಶಿವಶಂಕರ್, ಪುಟ್ಟಯ್ಯ, ಮುಜರಾಯಿ ಇಲಾಖೆಯ ಅಕ್ಕಯ್ಯಮ್ಮ, ಪಾರುಪತ್ತೇದಾರ ಲೋಕೇಶ್, ಅಗ್ಗುಂದ ಗ್ರಾ.ಪಂ ಸದಸ್ಯ ಗಿರೀಶ್, ಜಾತ್ರಾ ಸಮಿತಿ ಸದಸ್ಯ ಟಿ.ಆರ್.ನಾಗರಾಜ್, ರಂಗರಾಜು, ಟಿ.ಆರ್.ಚಂದ್ರು, ಗೋವಿಂದರಾಜ್, ರೈಲ್ವೆಯ ರಂಗಸ್ವಾಮಿ, ಶಂಕರ್, ಗ್ರಾ.ಪಂ ಮಾಜಿ ಸದಸ್ಯ ಗಿರೀಶ್, ಬಿಜೆಪಿ ಮುಖಂಡ ಮನೋಜ್‍ಕುಮಾರ್, ವಿಶ್ವನಾಥ್, ಜಗದೀಶ್, ಆರ್ಚಕರಾದ ರಾಮ್‍ಪ್ರಸಾದ್, ವರದರಾಜು, ಉಮಾಪತಿ ಮೊದಲಿಯಾರ್, ಎಸ್.ಎಲ್.ಎನ್ ವಿಜಯಕುಮಾರ್, ನಟರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Translate »