ನಗರಸಭೆ ಚುನಾವಣೆ: ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ಸೂಚನೆ
ಚಾಮರಾಜನಗರ

ನಗರಸಭೆ ಚುನಾವಣೆ: ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ಸೂಚನೆ

August 8, 2018

ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನಿಯೋಜಿತರಾಗಿ ರುವ ಅಧಿಕಾರಿಗಳು ಅತ್ಯಂತ ಹೊಣೆ ಗಾರಿಕೆಯಿಂದ ಕರ್ತವ್ಯ ನಿರ್ವಹಿಸ ಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಗರಸಭೆ ಚುನಾವಣೆಗೆ ನೇಮಕವಾಗಿರುವ ಚುನಾವಣಾ ಅಧಿಕಾರಿ, ಮಾದರಿ ನೀತಿಸಂಹಿತೆ ಪಾಲನೆ ತಂಡ, ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭಾ ಚುನಾವಣೆಗೆ ಈಗಾಗಲೇ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಆಗಸ್ಟ್ 10ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಚುನಾವಣೆ ಕೆಲಸಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸವನ್ನು ಹಗುರವಾಗಿ ಪರಿಗಣಿಸದೆ ಜವಾಬ್ದಾರಿಯುತವಾಗಿ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಎರಡೂ ನಗರಸಭೆಗಳಲ್ಲಿ ತಲಾ 31 ವಾರ್ಡ್‍ಗಳು ಇವೆ. ಚಾಮರಾಜನಗರ ನಗರಸಭೆಯಲ್ಲಿ 61, ಕೊಳ್ಳೇಗಾಲ ನಗರ ಸಭೆಯಲ್ಲಿ 45 ಮತಗಟ್ಟೆಗಳು ಬರಲಿವೆ. ಈ ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಇತರೆ ಮೂಲಸೌಕರ್ಯಗಳು ಲಭ್ಯ ವಿದೆಯೇ ಎಂಬ ಬಗ್ಗೆ ತುರ್ತಾಗಿ ಮತ್ತೊಮ್ಮೆ ಪರಿಶೀಲಿಸಬೇಕು. ಅಗತ್ಯ ಸೌಲಭ್ಯಗಳು ಬೇಕಿದ್ದರೆ ಶೀಘ್ರವೇ ಪೂರ್ಣಗೊಳಿಸ ಬೇಕು ಎಂದು ನಿರ್ದೇಶನ ನೀಡಿದರು.

ಚುನಾವಣಾ ಸಂಬಂಧ ಆಗಸ್ಟ್ 2 ರಿಂದಲೇ ಸದಾಚಾರ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆ ಪ್ರಕ್ರಿಯೆ ಮುಗಿ ಯುವ ಸೆಪ್ಟೆಂಬರ್ 1ರವರೆಗೆ ಸದಾಚಾರ ಸಂಹಿತೆ ಇರಲಿದೆ. ಈ ಅವಧಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈಗಾಗಲೇ ಸದಾಚಾರ ಸಂಹಿತೆ ಪಾಲನೆ ಸಂಬಂಧ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವೆಚ್ಚ ಮಾಡಲಿರುವ ಲೆಕ್ಕಪತ್ರಗಳ ಕುರಿತು ನಿಗಾವಹಿಸಲು ನಿಯೋಜಿತರಾಗಿರುವ ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ ಅವಧಿ ದಿನದಿಂದಲೇ ಅಭ್ಯರ್ಥಿಗಳ ಖರ್ಚುವೆಚ್ಚವನ್ನು ಲೆಕ್ಕಕ್ಕೆ ಪರಿಗಣಿಸ ಬೇಕಾಗುತ್ತದೆ. ಸೆಕ್ಟರ್ ಅಧಿಕಾರಿಗಳು ಸಹ ನೇಮಕವಾಗಿದ್ದು, ಆಯಾ ನಿಗದಿತ ವಾರ್ಡುಗಳಲ್ಲಿ ಚುನಾವಣಾ ಸಂಬಂಧವಹಿಸ ಬೇಕಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.

ಚುನಾವಣಾ ಅಕ್ರಮ ತಡೆಗಟ್ಟುವ ಸಲು ವಾಗಿ ನಗರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುತ್ತಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿಸಿ ದಂತೆ 5, ಕೊಳ್ಳೇಗಾಲ ನಗರಸಭೆಗೆ ಸಂಬಂ ಧಿಸಿದಂತೆ 4 ಚೆಕ್ ಪೋಸ್ಟ್‍ಗಳ ಕಾರ್ಯ ಚಟುವಟಿಕೆಗಳಿಗೆ ಸ್ಥಳ ನಿಗಧಿ ಮಾಡ ಲಾಗಿದೆ. ಆಯಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಚೆಕ್ ಪೋಸ್ಟ್‍ಗಳು ಕಾರ್ಯ ನಿರ್ವಹಿಸಲಿವೆ. ಇನ್ನೂ ಅಗತ್ಯಬಿದ್ದಲ್ಲಿ ಸ್ಥಾಪನೆ ಮಾಡಬಹುದಾದ ಚೆಕ್ ಪೋಸ್ಟ್ ಗಳ ವಿವರಗಳನ್ನು ಆಯಾ ಭಾಗದ ಚುನಾವಣಾ ಅಧಿಕಾರಿಗಳು ನೀಡುವಂತೆ ಕಾವೇರಿ ತಿಳಿಸಿದರು. ಮತದಾನ ಅಧಿಕಾರಿ ಸಿಬ್ಬಂದಿ ಸೇರಿದಂತೆ ಇನ್ನಿತರ ಚುನಾವಣೆ ಕೆಲಸ ಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲು ಮಾಸ್ಟರ್ ಟ್ರೈನರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಶೀಘ್ರವೇ ತರಬೇತಿ ಆಯೋಜನೆಗೆ ಅಗತ್ಯ ಕ್ರಮ ವಹಿಸಬೇಕು. ಒಟ್ಟಾರೆ ಚುನಾವಣೆಗೆ ನಿಯೋಜಿತರಾಗಿರುವ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿ ಯಾವುದೇ ಲೋಪವಿಲ್ಲದೆ ಚುನಾವಣಾ ಕಾರ್ಯ ವನ್ನು ಯಶಸ್ವಿಯಾಗಿ ನಿಭಾಯಿಸಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳ ಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಪವರ್ ಪಾಯಿಂಟ್ ಮೂಲಕ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಚುನಾವಣಾ ಕಾರ್ಯಕ್ಕೆ ನೇಮಕವಾಗಿ ರುವ ತಹಸೀಲ್ದಾರರು, ನಗರಸಭೆ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »