ಮೈಸೂರು: ಕಳೆದ ಮೇ 16ರಂದು ಮೈಸೂರಿನ ಹೆಬ್ಬಾಳು ರಿಂಗ್ ರೋಡ್ ಜಂಕ್ಷನ್ನಲ್ಲಿ ನಡೆದ ಶೂಟೌಟ್ ಪ್ರಕರಣದ ವೇಳೆ ಪರಾರಿ ಯಾದರೆನ್ನಲಾದ ಇಬ್ಬರ ಸುಳಿವು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ವಿಜಯನಗರ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಬಿ.ಜಿ.ಕುಮಾರ್ ನಡೆಸಿದ ಶೂಟೌಟ್ ನಲ್ಲಿ ಪಂಜಾಬ್ ಮೂಲದ ಸುಕ್ವಿಂದರ್ ಸಿಂಗ್ ಎಂಬಾತ ಸಾವನ್ನಪ್ಪಿದ್ದ. ಈ ವೇಳೆ ಆತನೊಂದಿಗೆ ಇದ್ದರೆನ್ನಲಾದ ಮತ್ತಿಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಪೊಲೀಸ್ ಇನ್ಸ್ಪೆಕ್ಟರ್ ದೂರಿನಲ್ಲಿ ತಿಳಿಸಿದ್ದರು.
ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಮೇ 16ರ ಬೆಳಿಗ್ಗೆ 9.30ಕ್ಕೆ ನಡೆದಿತ್ತು. ಅಂದೇ ಪ್ರಕರಣ ದಾಖಲಾಗಿತ್ತಾದರೂ, ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆ ಯನ್ನು ಸಿಐಡಿಗೆ ವಹಿಸಲಾಗಿತ್ತು. ಅಮಾನ್ಯೀಕರಣಗೊಂಡಿದ್ದ ನೋಟುಗಳ ವಿನಿಮಯ ದಂಧೆಗಾಗಿ ಸುಕ್ವಿಂದರ್ ಸಿಂಗ್ ತನ್ನಿಬ್ಬರು ಸಹಚರರೊಂದಿಗೆ ಮೈಸೂರಿಗೆ ಬಂದು ಹೆಬ್ಬಾಳು ಅಪಾರ್ಟ್ಮೆಂಟ್ವೊಂದರ ಬಳಿ ರಿಂಗ್ ರೋಡ್ ಜಂಕ್ಷನ್ನಲ್ಲಿ ಕಾರು ನಿಲ್ಲಿಸಿಕೊಂಡು ವ್ಯವಹರಿಸುತ್ತಿದ್ದಾಗ ಭಾತ್ಮೀದಾರ ವಿಜಯ್ ಕುಮಾರ್ ನೀಡಿದ್ದ ಮಾಹಿತಿ ಆಧರಿಸಿ ಇನ್ಸ್ಪೆಕ್ಟರ್ ದಾಳಿ ನಡೆಸಿದ್ದರು. ಕಾರಿನಲ್ಲಿದ್ದವರು ತಮ್ಮ ಮೇಲೆ ದಾಳಿ ನಡೆಸಲು ಮುಂದಾದಾಗ ತಾವು ಆತ್ಮರಕ್ಷಣೆಗಾಗಿ ಶೂಟ್ ಮಾಡಿದೆ ಎಂದು ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ದೂರಿನಲ್ಲಿ ತಿಳಿಸಿದ್ದರು. ಇನ್ಸ್ಪೆಕ್ಟರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು, ಘಟನೆ ವೇಳೆ ಪರಾರಿಯಾದರು ಎನ್ನಲಾದ ಸುಕ್ವಿಂದರ್ ಸಿಂಗ್ ಸಹಚರರನ್ನು ಪತ್ತೆಗೆ ಶೋಧ ಆರಂಭಿಸಿದ್ದರು. ಕಳೆದ 15 ದಿನಗಳ ತನಿಖೆಯಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಪಂಜಾಬ್ಗೆ ತೆರಳಿದ ತನಿಖಾಧಿಕಾರಿಗಳು, ಆ ವ್ಯಕ್ತಿಗಳ ಪತ್ತೆಗೆ ಅಲ್ಲಿನ ಸ್ಥಳೀಯ ಪೊಲೀಸರು ಹಾಗೂ ಗುಪ್ತ ವಾರ್ತಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆರವು ಪಡೆದು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರು ಸಿಕ್ಕಿದಲ್ಲಿ ಅಂದು ಮೈಸೂರಿನಲ್ಲಿ ನಡೆದ ಘಟನೆ ನೈಜತೆ ತಿಳಿಯಲಿದ್ದು, ಇಡೀ ಪ್ರಕರಣದ ಬಗ್ಗೆ ಸ್ಪಷ್ಟತೆ ಬಂದ ನಂತರ ಸಿಐಡಿ ಅಧಿಕಾರಿಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವರು ಎಂದೂ ನಂಬಲರ್ಹ ಮೂಲಗಳು ತಿಳಿಸಿವೆ.