ಮೈಸೂರು: ಕೆಆರ್ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಇಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್ ಹಾಗೂ ಬೃಹತ್ ಕಾವೇರಿ ಮಾತೆ ಪ್ರತಿಮೆ ಸ್ಥಾಪನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕಾಡಾ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಕೆಆರ್ಎಸ್ ಅಣೆಕಟ್ಟೆಯ ಬಳಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಹಾಗೂ 125 ಅಡಿಯ ಬೃಹತ್ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಉದ್ದೇಶವು ಸದುದ್ದೇಶದಿಂದ ಕೂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ಎಸ್ ಅಣೆಕಟ್ಟೆಯ ಮೂಲ ಉದ್ದೇಶ ಕೃಷಿ ಚಟುವಟಿಕೆಗೆ ನೀರು ಪೂರೈಸು ವುದು ಹಾಗೂ ಕುಡಿಯುವ ನೀರು ಒದಗಿಸುವುದಾಗಿದೆ. ಇಂತಹ ಮಹತ್ವದ ಉದ್ದೇಶ ದೊಂದಿಗೆ ಅಂದಿನ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ದೇಶನ ದಂತೆ ಸರ್ ಎಂ.ವಿಶ್ವೇಶ್ವರಯ್ಯ ಅವರ ತಂತ್ರಜ್ಞಾನದಲ್ಲಿ ಕೆಆರ್ಎಸ್ ನಿರ್ಮಾಣಗೊಂಡಿತು. ನಾಡಿನ ಜನತೆ ಬಗ್ಗೆ ಇದ್ದ ಇಚ್ಫಾಸಕ್ತಿಯಿಂದ ರೂಪುಗೊಂಡ ಕೆಆರ್ಎಸ್ನ ಇತಿಹಾಸ ಹಾಗೂ ಉದ್ದೇಶ ಅರಿಯದ ಕೆಲ ರಾಜಕಾರಣಿಗಳು ಡಿಸ್ನಿಲ್ಯಾಂಡ್ನಂತಹ ಮಾದರಿ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿದ್ದು, ಇದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರಕ್ಕೆ ನಿಜವಾಗಲೂ ರೈತಪರ ಕಾಳಜಿ ಹಾಗೂ ರಾಜ್ಯದ ಜನತೆಯ ಹಿತ ಕಾಯುವ ಉದ್ದೇಶವಿದ್ದರೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳನ್ನು ಜಾರಿಗೆ ತರಲಿ. ಅದನ್ನು ಬಿಟ್ಟು ಕೆಆರ್ಎಸ್ ಅಣೆಕಟ್ಟೆಗೆ ಹಾನಿಯುಂಟು ಮಾಡುವಂತಹ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾ ದರೆ ರಾಜ್ಯ ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಾರ್ಯಕರ್ತರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ, ಉತ್ತನಹಳ್ಳಿ ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.