ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ
ಮೈಸೂರು

ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ

November 22, 2018

ಮೈಸೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯ ಹುಣಸೂರು ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಹುಣಸೂರು ತಾಲೂಕು, ಬಿಳಿಕೆರೆ ಹೋಬಳಿ, ಕೆಂಪನಹಳ್ಳಿ ಗ್ರಾಮದ ಸಿದ್ದರಾಮೇಗೌಡರ ಮಗ ಕೆ.ಎನ್. ರಘು(33) ಗಾಯಗೊಂಡವರಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಇನ್‍ಫೋಸಿಸ್‍ನಲ್ಲಿ ಕೆಲಸ ಮಾಡುತ್ತಿರುವ ರಘು, ಮಂಗಳವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿಕೊಂಡು ಟಿವಿಎಸ್ ಸ್ಟಾರ್‍ಸಿಟಿ(ಕೆಎ-45, ಜೆ.807) ಬೈಕ್‍ನಲ್ಲಿ ಪತ್ನಿ ತವರು ಹಗರನಹಳ್ಳಿ ಮಂಟಿಕೊಪ್ಪಲು ಗ್ರಾಮಕ್ಕೆ ಹೋಗುತ್ತಿದ್ದಾಗ ಹಿಂದಿ ನಿಂದ ಬಂದ ಬಿಎಂಡಬ್ಲ್ಯೂ (ಕೆಎ51, ಝಡ್ 8689) ಕಾರು, ಹುಣಸೂರು ಹೆದ್ದಾರಿಯ ಹೊನಲು ಮಾರಮ್ಮ ದೇವಸ್ಥಾನ ಸಮೀಪ ಕೆ.ಆರ್.ನಗರಕ್ಕೆ ಹೋಗುವ ರಸ್ತೆ ಕ್ರಾಸ್ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ರಘು ಅವರ ತಲೆಗೆ ತೀವ್ರ ಗಾಯಗಳಾಗಿದೆ. ತಕ್ಷಣ ಅವರನ್ನು ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಅವರ ಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಿಳಿಕೆರೆ ಠಾಣೆ ಸಬ್‍ಇನ್‍ಸ್ಪೆಕ್ಟರ್ ಮಹದೇವ ನಾಯ್ಕ ಹಾಗೂ ಸಿಬ್ಬಂದಿ ಮಹಜರು ನಡೆಸಿ ಎರಡೂ ವಾಹನಗಳನ್ನೂ ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Translate »