ಮೈಸೂರು: ಕಾಂಗ್ರೆಸ್ ವಿರೋಧಿ ಚಟುವಟಿಕೆ ನಡೆಸಿದ ಅಜ್ಜು ಸಹೋದರರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಮೈಸೂರಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಇರ್ಫಾನ್ ಪಾಷಾ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ತಮ್ಮ ಅಸಮಾಧಾನ ವನ್ನು ಹೊರ ಹಾಕಿದರು. ಅಜ್ಜು ಸಹೋದರರು ಜೆಡಿಎಸ್, ಬಿಎಸ್ಪಿ, ಎಸ್ಡಿಪಿಐ ಪಕ್ಷದೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್ ವಿರೋಧಿ ಚಟುವಟಿಕೆ ನಡೆಸಿದ್ದರು. ಕಳೆದ ಚುನಾವಣೆ ಯಲ್ಲಿ ಈ ಸಹೋದರರು ಶಾಸಕ ತನ್ವೀರ್ಸೇಠ್ ಹಾಗೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಲ್ಲದೆ, ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೂ ಕಾರಣರಾಗಿದ್ದಾರೆ. ಇಂಥವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿರುವುದು ಮೂಲ ಕಾರ್ಯಕರ್ತರಿಗೆ ನೋವಾಗಿದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಕೂಡಲೇ ಕಾಂಗ್ರೆಸ್ನಿಂದ ಅವರ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು. ಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸತ್ಯರಾಜು, ಮುಖಂಡರಾದ ಮುಸ್ತಾಕ್, ಬಾಬು, ಸಮೀಉಲ್ಲಾ ಇದ್ದರು.