ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ.ಕಾರಿಯಪ್ಪ ಅವರ ಜನ್ಮ ದಿನ ಆಚರಿಸಲಾಯಿತು. ಈ ಸಂದರ್ಭ ಕಾರಿಯಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಕಾಲೇಜು ಆವರಣದಲ್ಲಿರುವ ಫೀಲ್ಢ್ ಮಾರ್ಷಲ್ ಕಾರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳ ಜೋಡಿ ಪ್ರತಿಮೆಗಳಿಗೆ ಪುಷ್ಪ ಗುಚ್ಚ ಅರ್ಪಿಸಿ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಎನ್ಎಸ್ಎಸ್ ಸ್ವಯಂ ಸೇವಕಿ ಅಂಜುಷ, ಕಾರಿಯಪ್ಪ ಅವರ ಬಗ್ಗೆ ಮಾಹಿತಿ ನೀಡಿ, ಭಾರತೀಯ ಸೈನ್ಯದಲ್ಲಿ ಶಿಸ್ತು ಹಾಗೂ ಸಮಯಪಾಲನೆ ಮೂಡಿ ಸಿದ, ಕರ್ನಾಟಕ ಹಾಗೂ ಭಾರತದ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದ ಕಾರ್ಯಪ್ಪ ನಮ್ಮ ಕೊಡಗಿನಲ್ಲಿ ಜನಿಸಿದ್ದಕ್ಕಾಗಿ ನಾವು ಹೆಮ್ಮೆ ಪಡಬೇಕು. ದೇಶಕ್ಕೆ ಅಪಾರ ಸೇವೆ ಸಲ್ಲಿಸಿರುವ ಸೇನಾ ರತ್ನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರಿಗೆ ಇನ್ನೂ ಕೂಡ ಭಾರತ ರತ್ನ ಪದವಿಯನ್ನು ನೀಡಿ ಗೌರವಿಸದೇ ಇರುವುದು ದುರಂತ. ಮುಂದಿನ ಅವಧಿಯ ಲ್ಲಾದರೂ ಕಾರಿಯಪ್ಪ ಅವರಿಗೆ ಭಾರತ ರತ್ನ ನೀಡಿ ಆ ಪದವಿಗೆ ಗೌರವ ನೀಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಆಶಿಸಿದರು. ಪ್ರಾಂಶುಪಾಲರಾದ ಪ್ರೊ. ಉಷಾಲತ ಮಾತನಾಡಿ, ಕಾರ್ಯಪ್ಪ ಅವರ ಆದರ್ಶಗಳನ್ನು ದಾರಿ ದೀಪ ಮಾಡಿ ಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಉಪ ಪ್ರಾಂಶುಪಾಲರಾದ ಪ್ರೊ. ಎ.ಎಂ. ಕಮಲಾಕ್ಷಿ ಹಾಗೂ ಎನ್ಸಿಸಿ ಕೆಡೆಟ್ ಲಾವಣ್ಯ ಮಾತನಾಡಿದರು. ಎನ್ ಎಸ್ಎಸ್ ಹಾಗೂ ಎನ್ಸಿಸಿ ವಿದ್ಯಾರ್ಥಿ ಗಳು ದೇಶ ಭಕ್ತಿಗೀತೆ ಹಾಡಿದರು.
ಈ ಸಂದರ್ಭ ಹಿರಿಯ ಉಪನ್ಯಾಸಕ ಪ್ರೊ.ಎ.ಎಸ್.ಪೂವಮ್ಮ, ಪ್ರೊ.ಎಂ.ಎಸ್. ಭಾರತಿ, ಕ್ಯಾಪ್ಟನ್ ಬ್ರೈಟ್ಕುಮಾರ್, ಎನ್ ಎಸ್ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್, ಅಧೀಕ್ಷಕಿ ಹೆಚ್.ಕೆ.ಸೀತಾಲಕ್ಷ್ಮಿ ಇನ್ನಿತರರು ಹಾಜರಿದ್ದರು.