ಮಹದೇಶ್ವರಬೆಟ್ಟದ ಗುಡ್ಡಗಾಡು ಹಳ್ಳಿ ರಸ್ತೆಗಳ ರಿಪೇರಿಗೆ ನಿರ್ಬಂಧ
ಚಾಮರಾಜನಗರ

ಮಹದೇಶ್ವರಬೆಟ್ಟದ ಗುಡ್ಡಗಾಡು ಹಳ್ಳಿ ರಸ್ತೆಗಳ ರಿಪೇರಿಗೆ ನಿರ್ಬಂಧ

March 21, 2020

 ಸಂದೇಶ್‍ಗೆ ಸಚಿವ ಈಶ್ವರಪ್ಪ ವಿವರಣೆ

ನಂ.ಗೂಡು ಕಂತೆ ಮಹದೇಶ್ವರಬೆಟ್ಟ ಪ್ರವಾಸಿ ಕೇಂದ್ರವಾಗಿಸಲು 33 ಲಕ್ಷ ರೂ. ಮೊದಲ ಕಂತಲ್ಲಿ ಕಾಮಗಾರಿ: ಸಿ.ಟಿ.ರವಿ
ಬೆಂಗಳೂರು,ಮಾ.20-ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಲೆ ಮಹದೇಶ್ವರ ಬೆಟ್ಟದಿಂದ, ಇಂಡಿಗನತ್ತ, ಪಡಸಲನತ್ತ, ನಾಗಮಲೆ ಮಾರ್ಗ ಮದ್ದೂರು ರಸ್ತೆ, ಹಳೆ ಯೂರು ರಸ್ತೆ, ತುಳಸೀಕೆರೆ ರಸ್ತೆ, ಮಲೆ ಮಹದೇಶ್ವರ ಬೆಟ್ಟದಿಂದ ಕೊಕ್ಕ ಬೋರೆ, ತೋಕೆರೆ, ದೊಡ್ಡಾಣಿ ರಸ್ತೆ, ಅಣಗಳ್ಳಿ ದೊಡ್ಡಿ ಯಿಂದ ಬಿ.ಎಂ.ಹಳ್ಳಿ (ಗೂಳ್ಯ) ಮಾರ್ಗ ಎಲ್ಲೆಮಾಳ ರಸ್ತೆಗಳು ಹಾಳಾಗಿದ್ದು, ಇವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವುದರಿಂದ ಈ ರಸ್ತೆಗಳನ್ನು ಪಂಚಾಯತ್ ರಾಜ್ ಎಂಜಿನಿಯ ರಿಂಗ್ ಇಲಾಖಾ ವತಿಯಿಂದ ಅಭಿವೃದ್ಧಿಪಡಿಸಲು ನಿರ್ಬಂಧವಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ರಸ್ತೆಗಳು ಈಚೆಗೆ ಬಿದ್ದ ಮಳೆಯಿಂದ ಪೂರ್ತಿ ಹಾಳಾಗಿದ್ದು, ಗುಡ್ಡಗಾಡುಗಳ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಬಹಳ ತೊಂದರೆ ಆಗಿರುವು ದರಿಂದ, ಕೂಡಲೇ ಈ ರಸ್ತೆಗಳ ದುರಸ್ತಿಗೊಳಿಸಬೇಕೆಂದು ಸಂದೇಶ್ ನಾಗರಾಜ್ ಆಗ್ರಹ ಪಡಿಸಿದರು. ಹನೂರು ತಾಲೂಕು ಎಲ್ಲೆಮಾಳ ಗ್ರಾಪಂ ವ್ಯಾಪ್ತಿಯ ಬಿ.ಎಂ.ಹಳ್ಳಿ(ಗೂಳ್ಯ) ರಸ್ತೆಯು ಮೂರು ಹಾರ್ಡ್‍ಪಾಥ್‍ಗಳನ್ನು ಹೊಂದಿದ್ದು ಹಾಳಾಗಿವೆ. ಈ ರಸ್ತೆಯಲ್ಲಿ ಬರುವ ಹಳ್ಳಕ್ಕೆ ಸೇತುವೆ ನಿರ್ಮಿಸಿ ಅಭಿವೃದ್ಧಿಪಡಿಸಲು ಒಟ್ಟು 75 ಲಕ್ಷ ರೂಪಾಯಿಗಳ ಅವಶ್ಯಕತೆ ಇದ್ದು, 2020-21ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡುವ ಕ್ರಮವನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

33 ಲಕ್ಷ ಬಿಡುಗಡೆ: ನಂಜನಗೂಡು ತಾಲೂಕು ಕಂತೆ ಮಹದೇಶ್ವರಬೆಟ್ಟದ ರಸ್ತೆಯ ಚರಂಡಿ ಮತ್ತು ಯಾತ್ರಿನಿವಾಸ ನಿರ್ಮಾಣ ಕಾಮಗಾರಿಯನ್ನು 100 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯ ಮೂಲಕ ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡ ಲಾಗಿದೆ. ಮೊದಲ ಕಂತಾಗಿ 33 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರವಾ ಸೋದ್ಯಮ ಸಚಿವ ಸಿ.ಟಿ. ರವಿ ಸಂದೇಶ್ ಅವರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕಂತೆ ಮಹದೇಶ್ವರಬೆಟ್ಟವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಸಂದೇಶ್ ನಾಗರಾಜ್ ಅವರ ಬೇಡಿಕೆಗೆ ಸಚಿವರು ಉತ್ತರ ನೀಡಿದರು.

Translate »