ಬೇಲೂರು: ಪಟ್ಟಣದ ದಿನಸಿ ಅಂಗಡಿಯ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ್ದ ಪಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಊಟಕ್ಕೆ ಬಳಕೆ ಮಾಡುವ ಪ್ಲಾಸ್ಟಿಕ್ ರೋಲ್, ಪ್ಲಾಸ್ಟಿಕ್ ಲೋಟ, ಥರ್ಮಾಕೋಲ್ ತಟ್ಟೆಗಳನ್ನು ವಶಪಡಿಸಿಕೊಂಡು 5,000 ದಂಡ ವಿಧಿಸಿದರು. ಪಟ್ಟಣದ ಗುಂಡಪ್ಪಶೆಟ್ಟಿ ಅವರ ಅಂಗಡಿಗೆ ದಾಳಿ ನಡೆಸಿದ ಅಧಿಕಾರಿ ಗಳು 5 ಪ್ಲಾಸ್ಟಿಕ್ ರೋಲ್, 10 ಲೋಟದ ಪ್ಯಾಕೇಟ್, 3 ಚೀಲ ಥರ್ಮಾಕೋಲ್ ತಟ್ಟೆ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದರು. ಬಳಿಕ, ಅಧಿಕಾರಿಗಳು ಪಟ್ಟಣದ ಹಲವು ದಿನಸಿ ಅಂಗಡಿಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಆದರೂ, ವ್ಯಾಪಾರಿಗಳು ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದರು. ದಾಳಿಯಲ್ಲಿ ಪರಿಸರ ಅಧಿಕಾರಿ ಮಧುಸೂದÀನ್, ಸಿಬ್ಬಂದಿ ಕುಮಾರ್, ಜಯರಾಂ, ನಟರಾಜ್, ಶಂಕರ್ ಇದ್ದರು.