ಮೈಸೂರು, ಜು.9(ಎಸ್ಬಿಡಿ)- ರಾಜ್ಯ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ವಿಧಾನಸಭೆಯನ್ನು ವಿಸರ್ಜಿಸಿ, ಮಧ್ಯಂತರ ಚುನಾವಣೆ ಮೂಲಕ ಹೊಸದಾಗಿ ಜನಾದೇಶ ಪಡೆಯುವುದೇ ಸೂಕ್ತ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಬೆಳವಣಿಗೆ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅವರು, ರಾಜೀ ನಾಮೆ ನೀಡುವ ಸ್ವಾತಂತ್ರ್ಯ ಶಾಸಕರಿಗಿದೆ. ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೋ? ಇಲ್ಲವೇ ಯಾವುದಾ ದರೂ ಒತ್ತಡ, ಆಮಿಷಗಳಿಗೆ ಒಳಗಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೋ? ಎಂಬುದನ್ನು ಸ್ಪೀಕರ್ ಅವರು ಮನವರಿಕೆ ಮಾಡಿಕೊಂಡು ಅಂಗೀಕರಿಸಬೇಕು. ಇದು ವಿಶೇಷ ಸಂದರ್ಭ ಹಾಗೂ ಗೊಂದಲ ಸೃಷ್ಟಿಯಾಗಿರುವ ಕಾರಣ ಪರಿಶೀಲಿಸಿ ಕ್ರಮ ವಹಿಸಲು ಸ್ವಲ್ಪ ಕಾಲಾವಕಾಶ ಬೇಕಾಗ ಬಹುದು. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಪಡೆದು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ, ವರದಿ ಸಲ್ಲಿಸಬಹುದು. ಹಾಗಾದರೆ ವಿಧಾನಸಭೆಯನ್ನು 6 ತಿಂಗಳ ಕಾಲ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಡ ಳಿತ ಜಾರಿಗೆ ತರಬಹುದು. ಬಳಿಕ ಬಹು ಮತವುಳ್ಳ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಇಲ್ಲವೇ ಚುನಾವಣೆ ಘೋಷಿಸಬಹುದು. ಇದು ಅಂದಿನ ಪರಿಸ್ಥಿತಿ ಮೇಲೆ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.
ಸಿಎಂ ರಾಜೀನಾಮೆ ಒಳ್ಳೆಯದೇ: ಪ್ರಸ್ತುತ ಬೆಳವಣಿಗೆ ನೋಡಿದರೆ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಧ್ಯಂತರ ಚುನಾ ವಣೆಗೆ ಶಿಫಾರಸು ಮಾಡುವುದು ಸೂಕ್ತ ಎನ್ನಿಸುತ್ತಿದೆ. ಮಂತ್ರಿ ಮಾಡಲಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಕೆಟ್ಟ ಬೆಳವಣಿಗೆ. ಇದನ್ನು ಪ್ರೋತ್ಸಾಹಿಸಬಾರದು. ಪ್ರಜಾಪ್ರಭುತ್ವ ಹಾಗೂ ಜನರ ಮೇಲೆ ನಂಬಿಕೆ ಯಿಟ್ಟು ಕುಮಾರಸ್ವಾಮಿ ತಾವೇ ರಾಜೀನಾಮೆ ನೀಡಿ, ಜನಾದೇಶಕ್ಕೆ ಮುಂದಾಗುವುದೇ ಒಳ್ಳೆ ಯದು ಎಂದು ಕೃಷ್ಣ ಅವರು ಅಭಿಪ್ರಾಯಿಸಿದರು.
ಈ ಸ್ಥಿತಿಗೆ ರಾಜಕೀಯ ನಾಯಕರೇ ಕಾರಣ: ಇಂದಿನ ರಾಜಕೀಯ ದುಸ್ಥಿತಿ ಹಾಗೂ ಎಲ್ಲಾ ಅನಾಹುತಗಳಿಗೆ ರಾಜಕೀಯ ನಾಯಕರೇ ಕಾರಣ. ನಾಲ್ಕೈದು ದಶಕದಿಂದ ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಅನೇಕ ಸಮಿತಿಗಳನ್ನೂ ರಚಿಸಿ, ವರದಿ ಪಡೆಯಲಾಗಿದೆ. ಇಂದ್ರಜಿತ್ ಗುಪ್ತ ಕಮಿಟಿ ನೀಡಿದ್ದ ರಾಜಕೀಯ ಸರಳೀಕರಣ ಸೂತ್ರ ಯಾವ ಪಕ್ಷಗಳಿಗೂ ಬೇಕಿಲ್ಲ. ಇದರ ಬಗ್ಗೆ ಯಾರಿಗೂ ಗಮನವಿಲ್ಲ. ಅನುಷ್ಠಾನಕ್ಕೆ ಬಂದರೆ ಪಟ್ಟಭದ್ರರ ರಕ್ಷಣೆ ಕಷ್ಟವಾಗುತ್ತದೆ. ಪ್ರಾಮಾಣಿಕ ಸಾಮಾನ್ಯರೂ ಚುನಾವಣೆಗೆ ಸ್ಪರ್ಧಿಸಿ, ಗೆಲ್ಲಬಹುದೆಂಬ ಆತಂಕ ಅವರಿಗಿದೆ. ಬಹುಪಾಲು ನಾಯ ಕರು ಪಟ್ಟಭದ್ರರ ಜೊತೆ ಸೇರಿ ದೇಶ ಲೂಟಿ ಮಾಡುವುದರಲ್ಲಿ ಆಸಕ್ತಿ ಹೊಂದಿ ದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮವೂ ಕೆಟ್ಟಿದೆ: ನಾಲ್ಕನೇ ಅಂಗ ಎನ್ನಲಾಗುವ ಮಾಧ್ಯಮವೂ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿ ಸುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸುವ ಬದಲು ಯಾವುದೋ ರಾಜಕೀಯ ಪಕ್ಷ ಅಥವಾ ನಾಯಕರ ಪರವಾಗಿ ನಿಂತಿರು ವಂತೆ ವರ್ತಿಸುತ್ತಿವೆ. ಇಂದಿನ ಅನಾಹುತ ಗಳಿಗೆ ರಾಜಕೀಯ ಪಕ್ಷಗಳಿಗೆ ಸಮಾನ ವಾಗಿ ಮಾಧ್ಯಮವೂ ಕಾರಣವಾಗುತ್ತದೆ. ಜಾತಿ, ಉಪಜಾತಿ, ಧರ್ಮ, ಭಾಷೆ ಆಧಾರ ದಲ್ಲಿ ಜನರನ್ನು ಒಡೆದಿದ್ದಾರೆ. ಹಿಂದೆ ಜನ ಅವಿದ್ಯಾವಂತರಾದರೂ ಅವರಿಗೆ ವಿವೇಕ ವಿತ್ತು. ಆದರೆ ಈಗಿನವರಿಗೆ ವಿದ್ಯೆ ಇದೆ ಆದರೆ ವಿವೇಕವಿಲ್ಲ. ಪವಿತ್ರ ಮತವನ್ನು 500, ಸಾವಿರ, 2 ಸಾವಿರಕ್ಕೆ ಮಾರಿ ಕೊಳ್ಳುತ್ತಾರೆ. ಹಾಗಾಗಿ ಯಾವುದೇ ಚಳ ವಳಿ ನಡೆದಿಲ್ಲ ಎಂದು ವಿಷಾದಿಸಿದರು.