ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿಷಾದ ಮಹನೀಯರ ಚಿಂತನೆಗಳು ವ್ಯರ್ಥ: ಬೇಸರ
ಮೈಸೂರು,ಡಿ.27(ಎಂಟಿವೈ)- ಸಮಾಜ ದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿ ಹಾಗೂ ರಾಜಕಾರಣದ ವ್ಯವಸ್ಥೆಯಿಂದಾಗಿ ಅಸಮಾನತೆ ತಾಂಡವವಾಡುತ್ತಿದೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶ್ರೀ ಕನಕದಾಸ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸಂತಶ್ರೇಷ್ಠ, ಭಕ್ತ ಕನಕದಾಸರ 532ನೇ À ಜಯಂತ್ಯು ತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೌತಮ ಬುದ್ಧ, ಬಸವ, ಡಾ.ಅಂಬೇ ಡ್ಕರ್, ಕನಕದಾಸರು ಸೇರಿದಂತೆ ಹಲವು ಮಹನೀಯರು ಸಮಾಜದಲ್ಲಿ ಸಮಾನತೆ ಸಾಧಿಸಲು ನಡೆಸಿದ ಪ್ರಯತ್ನವೆಲ್ಲಾ ರಾಜಕೀಯ ಮತ್ತು ಜಾತೀಯತೆ ಹಾಳು ಮಾಡುತ್ತಿದೆ. ರಾಜಕೀಯ ಕಾರಣದಿಂದ ಜಾತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬಲಿಷ್ಠವಾಗು ತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾ ಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಸಮಾಜ ಸುಧಾ ರಕ ಬಸವಣ್ಣ ಮನುಷ್ಯರು ಪರಸ್ಪರ ಪ್ರೀತಿ ಸಬೇಕು. ಆ ಮೂಲಕ ಸಮಾನತೆ ಸಾಧಿಸ ಬೇಕು ಎಂದು ಸಂದೇಶ ಸಾರಿದರು. ಗೌತಮ ಬುದ್ಧ ಶಾಂತಿ, ಸಮಾನತೆ ಕುರಿತು ಬೆಳಕು ಚೆಲ್ಲಿದರು. ಈ ಮಹನೀಯರು ಚೆಲ್ಲಿದ ಬೆಳಕು ದೇಶದುದ್ದಗಲಕ್ಕೂ ಪಸರಿಸಲು ಬಿಡದೆ ಸಾಮಾಜಿಕ ವ್ಯವಸ್ಥೆ ಹಾಳು ಮಾಡುವ ಕುತಂತ್ರ ವ್ಯಾಪಕವಾಗಿ ನಡೆಯುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾ ನತೆ ಅವಕಾಶ ಕಲ್ಪಿಸದಿದ್ದರೆ, ಇಂದು ದೇಶದ ಸ್ಥಿತಿ ಅಧೋಗತಿಗೆ ಕುಸಿಯುತ್ತಿತ್ತು ಎಂದರು.
ಸಮಾಜದಲ್ಲಿ ಶಾಂತಿ ನೆಲೆಸಲು, ಕೋಮು ಸೌಹಾರ್ದತೆ ಮನೆ ಮಾಡಲು ಎಲ್ಲಾ ಜಾತಿ, ಜನಾಂಗ, ವರ್ಗಕ್ಕೆ ಸೇರಿದ ಜನರು ಡಾ. ಅಂಬೇಡ್ಕರ್, ಬಸವ ಜಯಂತಿ, ಕನಕ ದಾಸರು ಸೇರಿದಂತೆ ಮಹನೀಯರ ಜಯಂತಿ ಯನ್ನು ಆಚರಿಸಬೇಕು. ಇವುಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸ ಬಾರದು. ಎಲ್ಲ ಮಹನೀಯರ ಆಶಯವೂ ಒಂದೇ ಆಗಿದ್ದು, ಸಮಾಜದಲ್ಲಿ ಶಾಂತಿ, ಸಮಾನತೆ ನೆಲೆಸಬೇಕೆಂದು ಸಂದೇಶ ಸಾರಿದ್ದಾರೆ. ಇದನ್ನು ಮನಗಂಡು ಎಲ್ಲ ಸಮುದಾಯದ ಜನರು ಒಗ್ಗೂಡಿ ಮಹನೀಯರ ಜಯಂತಿ ಆಚರಿಸಿದಾಗ ಮಾತ್ರ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಮೌಢ್ಯಕ್ಕೆ ಮಣೆ ಬೇಡ: ಕನಕದಾಸರು ಅಸಮಾನತೆ, ಮೌಢ್ಯ ತೊಡೆದು ಹಾಕಲು ಸಂಪೂರ್ಣ ಬದುಕನ್ನೇ ಮೀಸಲಿಟ್ಟಿದ್ದರು. ಆದರೆ, ಈಗ ದೇವರ ಹೆಸರಿನಲ್ಲೂ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಇಲ್ಲಸಲ್ಲದ್ದನ್ನು ಹೇಳಿ, ಭಯ ಹುಟ್ಟಿಸಿ, ಮೌಢ್ಯ ಬಿತ್ತುತ್ತಿ ದ್ದಾರೆ. ಗ್ರಹಣ ವೈಜ್ಞಾನಿಕವಾಗಿ ನಡೆಯು ವುದು. ಕೆಲವರು ಗ್ರಹಣ ಸಮಯದಲ್ಲಿ ಏನನ್ನೂ ಸೇವಿಸಬಾರದು ಎನ್ನುತ್ತಾರೆ. ಇದಕ್ಕೆ ಕಿವಿಗೊಡದೆ ಮೊದಲು ನಮ್ಮಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ನಿನ್ನ ಅಭಿವೃದ್ಧಿಗೆ ನೀನೇ ಶಕ್ತಿ, ನೀನೆ ಬೆಳಕು ಎಂಬುದನ್ನು ಸಾಬೀತು ಮಾಡ ಬೇಕು ಎಂದು ಕಿವಿಮಾತು ಹೇಳಿದರು.
ಸ್ವಾಸ್ಥ್ಯ ಹದಗೆಡಿಸಲು ಸಿಎಎ ಜಾರಿ: ಕೇಂದ್ರ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ಮರೆಮಾಚಲು, ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ವಾಗಿ ಮಾರ್ಪಡಿಸಲು ಸಂಚು ನಡೆಸಿದೆ. ಸರ್ವಧರ್ಮಗಳ ಶಾಂತಿಯ ತೋಟದಂತೆ ಇದ್ದ ಭಾರತದಲ್ಲಿ ಕೋಲಾಹಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಧರ್ಮ-ಧರ್ಮ ಗಳು, ಜಾತಿ-ಜಾತಿಗಳನ್ನು ಎತ್ತಿಕಟ್ಟಿ ಸಮಾಜ ವನ್ನು ಒಡೆದು ಆಳ್ವಿಕೆ ಗಟ್ಟಿಗೊಳಿಸ ಬಹುದು ಎಂದು ಮೋದಿ ಸರ್ಕಾರ ಸಿಎಎ ಜಾರಿ ಮಾಡಿದೆ ಎಂದು ಆರೋಪಿಸಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಅರವಿಂದನಗರದ ಬನಶಂಕರಿ ಅಮ್ಮ ದೇವಾ ಲಯದ ಮುಂಭಾಗದಿಂದ ಸಂತಕವಿ ಭಕ್ತ ಕನಕದಾಸರ ಪ್ರತಿಮೆಯನ್ನು ಅಲಂಕೃತ ತೆರೆದ ವಾಹನದಲ್ಲಿಟ್ಟು ಮಂಗಳ ವಾದ್ಯ ಗಳೊಂದಿಗೆ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಕೆ.ಆರ್.ನಗರದ ಕನಕ ಗುರುಪೀಠದ ಶಿವಾ ನಂದಪುರಿ ಸ್ವಾಮೀಜಿ 2020ರ ಕ್ಯಾಲೆಂ ಡರ್ ಬಿಡುಗಡೆಗೊಳಿಸಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಶ್ರೀ ಕನಕದಾಸ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣೇಗೌಡ, ಜಿಲ್ಲಾ ಹಾಲು ಒಕ್ಕೂ ಟದ ಅಧ್ಯಕ್ಷ ಎಸ್.ಸಿದ್ದೇಗೌಡ, ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ ಸದಸ್ಯರಾದ ಬೀರಿ ಹುಂಡಿ ಬಸವಣ್ಣ, ಡಿ.ರವಿಶಂಕರ್, ಎಪಿ ಎಂಸಿ ಪ್ರಭುಸ್ವಾಮಿ, ಸಂಘದ ಗೌರವಾಧ್ಯಕ್ಷ ಎಂ.ಮಲ್ಲಯ್ಯ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಮಾಜಿ ಮೇಯರ್ ನಾರಾಯಣ, ಸಂಘದ ಪದಾಧಿಕಾರಿಗಳಾದ ಎಂ.ಭಾಸ್ಕರ್, ವಿರೇಶ್, ಎಚ್. ಎಂ.ನಾಗರಾಜ ಮೂರ್ತಿ, ಮಂಜುನಾಥ್, ಸಂಗೀತ ವಿದ್ವಾಂಸ ಕಿರಗಸೂರು ರಾಜಪ್ಪ, ನಿರ್ದೇಶಕ ನಂಜುಂಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.