ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು

ದೊಡ್ಡೇಗೌಡನ ಕೊಪ್ಪಲಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

October 16, 2018

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನ ಹಳ್ಳಿ ಪಾಳ್ಯ ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಗ್ರಾಮಗಳ ಬಿಪಿಎಲ್ ಕುಟುಂಬ ಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿಲೋಮಿಟರ್ ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಆದರೆ ಅಷ್ಟು ದೂರ ಕ್ರಮಿಸಿ ಪಡಿತರ ಪಡೆದು ಹೊತ್ತು ತರಲು ಹರಸಾಹಸ ಪಡಬೇಕಾದ ಕಾರಣ ಮೂರು ಗ್ರಾಮಗಳಿಗೂ ಸರಿಹೊಂದು ವಂತೆ ದೊಡ್ಡೇಗೌಡನಕೊಪ್ಪಲು ಗ್ರಾಮಕ್ಕೆ ನೂತನ ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ನ್ಯಾಯ ಬೆಲೆ ಅಂಗಡಿಯನ್ನು ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ತೆರೆಯುವಂತೆ ಅನುಮತಿ ನೀಡಲಾಗಿದೆ. ಆದರೆ ಪ್ರಸಕ್ತ ತಿಂಗಳ ಪಡಿತರ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಗೇ ಪೂರೈಕೆಯಾಗಿದ್ದು, ಇದರಿಂದ ಕೆರಳಿದ ಗ್ರಾಮಸ್ಥರು ಬೆಟ್ಟದತುಂಗ ನ್ಯಾಯಬೆಲೆ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳಕ್ಕೆ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಸಣ್ಣಸ್ವಾಮಿ ಭೇಟಿ ನೀಡಿ, ತಾಂತ್ರಿಕ ದೋಷದ ಕಾರಣದಿಂದ ಹೆಬ್ಬೆಟ್ಟು ಗುರುತಿಸುವಿಕೆ ಸಾಧ್ಯವಾಗದಿರುವು ದರಿಂದ ಈ ಮೂರು ಗ್ರಾಮಗಳ ಬಿಪಿಎಲ್ ಕುಟುಂಬಗಳಿಗೆ ಪಡಿತರ ದೊರೆತಿಲ್ಲ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಲದೆ ನೂತನ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ತಹಶೀಲ್ದಾರರಿಗೆ ಮನವಿ ಸಲ್ಲಿಸುವಂತೆ ಗ್ರಾಮಸ್ಥರಿಗೆ ತಿಳಿಸಿ ದರು. ಈ ಸಂದರ್ಭದಲ್ಲಿ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನಹಳ್ಳಿ ಪಾಳ್ಯ ಗ್ರಾಮಸ್ಥರು ಉಪಸ್ಥಿತರಿದ್ದರು.

Translate »