ವಿಶ್ವನಾಥ್, ಸಿದ್ದರಾಮಯ್ಯ ಮುಸುಕಿನ ಗುದ್ದಾಟದಿಂದ ಕುರುಬ ಸಮಾಜಕ್ಕೇ ನಷ್ಟ
ಮೈಸೂರು

ವಿಶ್ವನಾಥ್, ಸಿದ್ದರಾಮಯ್ಯ ಮುಸುಕಿನ ಗುದ್ದಾಟದಿಂದ ಕುರುಬ ಸಮಾಜಕ್ಕೇ ನಷ್ಟ

July 1, 2018

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಅಡಗೂರು ಹೆಚ್.ವಿಶ್ವನಾಥ್ ನಡುವಿನ ಮುಸುಕಿನ ಗುದ್ದಾಟದಲ್ಲಿ ಕುರುಬ ಸಮಾಜ ಬಡವಾಗುತ್ತಿದೆ ಎಂದು ಹಾಲು ಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ದಾವಣಗೆರೆ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ 14 ಕೋಟಿಯಷ್ಟಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಕುರುಬ ಸಮಾಜದ ಜನಸಂಖ್ಯೆ ರಾಜ್ಯದ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಜೀವಿಸುತ್ತಿರುವ ಸಮುದಾಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದೇ ಹೆಮ್ಮೆಯ ವಿಚಾರ. ಹೆಚ್.ವಿಶ್ವನಾಥ್ ಅವರ ಕೊಡುಗೆಯೂ ಸಮಾಜಕ್ಕೆ ಅಪಾರವಾದದ್ದು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪನೆ ಮಾಡುವಲ್ಲಿ ಸಂಸ್ಥಾಪನಾ ಅಧ್ಯಕ್ಷರಾಗಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿದ್ದರು. ಸಮಾಜದಲ್ಲಿರುವ ಬೆರಳೆಣಿಕೆಯಷ್ಟು ರಾಜಕೀಯ ಮುಖಂಡರ ಏಳಿಗೆಯನ್ನು ಕುರುಬ ಸಮಾಜ ಬಯಸುತ್ತಿದೆ. ಆದರೆ ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ನಡೆಯುತ್ತಾ, ಕುಗ್ಗಿರುವ ಸಮಾಜವನ್ನು ಇನ್ನಷ್ಟು ಕುಗ್ಗುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ವರಿಗೂ ಸಮಪಾಲು, ಸಮಬಾಳು ಎಂಬ ಘೋಷಣೆಯಲ್ಲಿ ಅನ್ಯ ಸಮಾಜದ ಕಡೆ ಗಮನಹರಿಸಿದ ಸರ್ಕಾರಕ್ಕೆ ಕುರುಬರು ವಿಶೇಷವಾಗಿ ಕಂಡಿಲ್ಲ. ಸಮಾಜದ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾಗ, ಸಮಾಜದ ಗುರುಪೀಠ ಅವರ ಪರವಾಗಿ ನಿಲ್ಲುವುದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯರ ಸ್ಥಾನದಲ್ಲಿ ಹೆಚ್.ವಿಶ್ವನಾಥ್ ಇದ್ದರೂ ಅವರ ಪರವಾಗಿಯೇ ಧ್ವನಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮಾಜದ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಜಗದ್ಗುರುಗಳು ಹೇಳಿಕೆ ನೀಡಿರುವುದನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಜಗದ್ಗುರುಗಳು ಗೆದ್ದೆತ್ತಿನ ಬಾಲ ಹಿಡಿಯುವುದೇ ಅಗಿದ್ದರೆ ಈಗ ಸಿದ್ದರಾಮಯ್ಯರು ಮುಖ್ಯಮಂತ್ರಿಗಳಲ್ಲ. ಆಡಳಿತ ನಡೆಸುತ್ತಿರುವುದು ಹೆಚ್.ವಿಶ್ವನಾಥ್ ಪ್ರತಿನಿಧಿಸುತ್ತಿರುವ ಜೆಡಿಎಸ್ ಪಕ್ಷ. ಆದ್ದರಿಂದ ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಕನಕ ಗುರುಪೀಠವನ್ನು ಹಾಗೂ ಜಗದ್ಗುರುಗಳನ್ನು ಹೊಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿಗಾಗಿ ಸಮಾಜದಲ್ಲಿ ಒಡಕು ಉಂಟಾಗುತ್ತಿದೆ. ಕುರುಬ ಸಮಾಜದ ಸಂಘಟನೆಗೆ ಹೆಚ್.ವಿಶ್ವನಾಥ್‍ರ ಮಾರ್ಗದರ್ಶನ ಅತ್ಯಗತ್ಯ. ಈ ರೀತಿಯ ಅಸಮಾಧಾನದ ಬಹಿರಂಗ ಹೇಳಿಕೆಗಳು ಸಮಾಜದ ಒಗ್ಗಟ್ಟು ಮುರಿಯುತ್ತವೆ. ಈ ನಿಟ್ಟಿನಲ್ಲಿ ಸಮಾಜ ಕಟ್ಟುವ ಪ್ರಯತ್ನಗಳು ನಡೆಯುವುದು ಅಗತ್ಯ ಎಂದು ರಾಜು ಮೌರ್ಯ ಸಮಾಜದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

Translate »