ನಾಲೆ ಅಂಚಿಗೆ ಸ್ಕೂಟರ್ ಉರುಳಿದಾಗ… ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು
ಮೈಸೂರು

ನಾಲೆ ಅಂಚಿಗೆ ಸ್ಕೂಟರ್ ಉರುಳಿದಾಗ… ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು

December 3, 2018

ಮಂಡ್ಯ:  ನಾಲೆ ಅಂಚಿಗೆ ಸ್ಕೂಟರ್ ಉರುಳಿ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ತಾಲೂಕಿನ ಲೋಕ ಸರಗ್ರಾಮದ ಬಳಿ ಭಾನುವಾರ ನಡೆದಿದೆ. ಗ್ರಾಮದ ನಾಗಮ್ಮ (50), ಅಂಬಿಕಾ (33) ಹಾಗೂ ಮಾನ್ಯತಾ (5) ಮೃತಪಟ್ಟವರು.

ಘಟನೆಯ ವಿವರ: ಅಂಬಿಕಾ ಅವರು ಕಳೆದ ಶುಕ್ರವಾರ (ನ.30) ನೂತನ ಗೃಹಪ್ರವೇಶ ನೆರವೇರಿಸಿದ್ದರು. ಇಂದು ತಾಯಿ ನಾಗಮ್ಮ ಹಾಗೂ ಮಗಳು ಮಾನ್ಯತಾಳೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಸ್ಕೂಟರ್‍ನಲ್ಲಿ ತೆರಳಿ, ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ ಲೋಕಸರ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ನಾಲೆಯ ದಂಡೆಯ ಮೇಲೆ ಉರುಳಿ ಬಿದ್ದಿದೆ. ಸ್ಕೂಟರ್ ನಾಲೆಯ ಮೇಲೆ ಉಳಿದಿದ್ದರೆ, ಈ ಮೂವರು ನಾಲೆಗೆ ಬಿದ್ದು ನೀರು ಪಾಲಾಗಿದ್ದಾರೆ.

ನಾಲೆಯ ದಂಡೆ ಮೇಲೆ ಸ್ಕೂಟರ್ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಅಂಬಿಕಾ ಮತ್ತು ನಾಗಮ್ಮ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಂಡ್ಯ ಮಿಮ್ಸ್‍ಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇವರು ಸಾವನ್ನಪ್ಪಿದರು. ಇತ್ತ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಾನ್ಯತಾ ಮೃತದೇಹ ಸಬ್ಬನಹಳ್ಳಿ ಬಳಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »