ಬೆಂಗಳೂರು, ಫೆ.2- ಬಿಗ್ಬಾಸ್ 7ನೇ ಆವೃತ್ತಿಯ ವಿನ್ನರ್ ಆಗಿ ಕುಂದಾಪುರ ಶೈನ್ಶೆಟ್ಟಿ ಹೊರಹೊಮ್ಮಿದ್ದು, ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದರೊಂದಿಗೆ ಈ ಬಾರಿಯ ಬಿಗ್ಬಾಸ್ಗೆ ವರ್ಣ ರಂಜಿತ ತೆರೆ ಬಿದ್ದಿದೆ. ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಭಾನುವಾರ ರಾತ್ರಿ ನಡೆದ ಬಿಗ್ಬಾಸ್ ಫಿನಾಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಶೈನ್ ಶೆಟ್ಟಿ ಹೆಸರನ್ನು ಘೋಷಿಸುತ್ತಿದ್ದಂತೆ ಬಿಗ್ಬಾಸ್ ಸ್ಟೇಜ್ ಬಾಣ ಬಿರುಸು ಗಳಿಂದ ಕಂಗೊಳಿಸಿತು. ಈ ಮೂಲಕ ಕಳೆದ 113 ದಿನಗಳಿಂದ ಎಲ್ಲರನ್ನು ರಂಜಿಸಿದ ಶೈನ್ಶೆಟ್ಟಿ ಬಿಗ್ಬಾಸ್ ಟ್ರೋಫಿ, ಟಾಟಾ ಮೋಟಾರ್ಸ್ ಅವರ ಅಲ್ಟ್ರೋಸ್ ಕಾರಿನೊಂದಿಗೆ 50 ಲಕ್ಷ ರೂ. ಹಾಗೂ ಹೆಚ್ಚುವರಿಯಾಗಿ 11 ಲಕ್ಷ ಸೇರಿ 61 ಲಕ್ಷ ರೂ.ಗಳನ್ನು ತನ್ನದಾಗಿಸಿಕೊಂಡರೇ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಕುರಿ ಪ್ರತಾಪ್ 6 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
ಈ ಬಾರಿಯ ಬಿಗ್ ಬಾಸ್ನಲ್ಲಿ 20 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿ ದ್ದರು. ಶೈನ್ಶೆಟ್ಟಿ, ಕುರಿ ಪ್ರತಾಪ್, ವಾಸುಕಿ ವೈಭವ್, ದೀಪಿಕಾ ದಾಸ್, ಭೂಮಿ ಶೆಟ್ಟಿ, ಪ್ರಿಯಾಂಕ, ಕಿಶನ್ ಬೆಳಗಲಿ, ಚಂದನಾ, ಚಂದನ್ ಆಚಾರ್, ರಕ್ಷಾ, ಸುಜಾತ, ಆರ್ಜೆ ಪೃಥ್ವಿ, ಗುರುಲಿಂಗಸ್ವಾಮಿ, ದುನಿಯಾ ರಶ್ಮಿ, ರಾಜು ತಾಳಿಕೋಟೆ, ಚೈತ್ರಾ ಕೋಟೂರು, ಜೈಜಗದೀಶ್, ರವಿ ಬೆಳಗೆರೆ, ಹರೀಶ್ ರಾಜ್, ಚೈತ್ರ ವಾಸುದೇವನ್ ಭಾಗವಹಿಸಿದ್ದರು. ಆದರೆ ಪ್ರತಿ ವಾರವೂ ಒಬ್ಬೊಬ್ಬ ಸ್ಪರ್ಧಿಗಳು ಮನೆಯಿಂದ ಎಲಿಮನೇಟ್ ಆಗಿದ್ದರು. ಅಂತಿಮವಾಗಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕಿ ವೈಭವ್, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಬಿಗ್ಬಾಸ್ ಫಿನಾಲೆ ತಲುಪಿದ್ದರು. ಅವರಲ್ಲಿ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಶನಿವಾರ ಮನೆಯಿಂದ ಹೊರಬಿದ್ದಿದ್ದರು. ಆ ಮೂಲಕ ಶೈನ್, ಪ್ರತಾಪ್ ಮತ್ತು ವಾಸುಕಿ ಬೆಸ್ಟ್ ತ್ರೀ ಸ್ಪರ್ಧಿಗಳಾಗಿ ಮೂಡಿ ಬಂದಿದ್ದರು. ಆದರೆ ಇಂದು ನಡೆದ ಮತ್ತೊಂದು ಎಲಿಮನೇಷನ್ನಲ್ಲಿ ವಾಸುಕಿ ವೈಭವ್ ಹೊರಬಂದರು.