ಮೈಸೂರು: ಕೃಷ್ಣರಾಜ ಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಮುಂಜಾಗ್ರತೆಯಾಗಿ ಉತ್ತರ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ಹಾರಂಗಿ ಅಣೆಕಟ್ಟೆಯಿಂದ 20,000 ಕ್ಯೂಸೆಕ್ಸ್ ನೀರನ್ನು ಬಿಡುತ್ತಿರುವ ಕಾರಣ ಕೆಆರ್ಎಸ್ ಅಣೆಕಟ್ಟೆಯಿಂದ 70 ಸಾವಿರ ಕ್ಯೂಸೆಕ್ಸ್ ನೀರನ್ನು ಇಂದು ಮುಂಜಾನೆ ಯಿಂದ ಕಾವೇರಿ ನದಿಗೆ ಬಿಡಲಾಗುತ್ತಿದೆ. 40,000 ಕ್ಯೂಸೆಕ್ಸ್ಗಿಂತ ಹೆಚ್ಚು ನೀರನ್ನು ಹೊರ ಬಿಟ್ಟಲ್ಲಿ ಬೃಂದಾವನದ ಉತ್ತರ ಭಾಗದ ಎಡಮುರಿಗೆ ನೀರು ತುಂಬುವುದರಿಂದ ಅಪಾಯ ತಪ್ಪಿಸುವ ಸಲುವಾಗಿ ಬೋಟಿಂಗ್ ಪಾಯಿಂಟ್ನಿಂದ ಉತ್ತರ ಬೃಂದಾವನಕ್ಕೆ ಪ್ರವಾಸಿಗರು ಪ್ರವೇಶಿಸದಂತೆ ಬಂದ್ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ.
ಹೊರ ಹರಿವಿನ ಪ್ರಮಾಣ 40 ಸಾವಿರ ಕ್ಯೂಸೆಕ್ಸ್ಗಿಂತ ಕಡಿಮೆಗೆ ಇಳಿಯುವವರೆಗೂ ಉತ್ತರ ಬೃಂದಾವನದ ಪ್ರವೇಶ ಬಂದ್ ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಗೆ ಹೆಚ್ಚು ನೀರು ಹರಿಸುತ್ತಿರುವ ಕಾರಣ ಮುಂಜಾಗ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಶ್ರೀರಂಗಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.