ಹುಣಸೂರು: ಸಾವಿರಾರು ವರ್ಷಗಳಿಂದ ಸಾಮಾಜಿಕ ಸಮಾನತೆ ಗಾಗಿ ಅನೇಕ ಮಹಾನ್ ವ್ಯಕ್ತಿಗಳು ಹೋರಾ ಡುತ್ತಾ ಬಂದಿದ್ದರೂ ಅದು ಇನ್ನೂ ಸಿಕ್ಕಿಲ್ಲ ಎಂದು ರಾಜ್ಯ ದಸಂಸ ಮುಖಂಡರಾದ ಎನ್.ಮುನಿಸ್ವಾಮಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ದಸಂಸ ಏರ್ಪಡಿಸಿದ್ದ ಸಾಮಾ ಜಿಕ ನ್ಯಾಯದ ನಿರಾಕರಣೆ ಮತ್ತು ದಲಿತ ಸಂಘರ್ಷದ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸುವ ಅವಕಾಶವಿದ್ದರೂ, ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಈವರೆವಿಗೂ ಸಾಮಾಜಿಕ ಸಮಾನತೆ ಕಲ್ಪಿ ಸುವಲ್ಲಿ ಪ್ರಜಾತಂತ್ರ ವ್ಯವಸ್ಥೆ ವಿಫಲವಾಗಿದೆ ಎಂದು ವಿಷಾದಿಸಿದರು.
ಇಂತಹ ಅವ್ಯವಸ್ಥಿತ ವಾತಾವರಣದಲ್ಲಿ ಉಳ್ಳವರ ದೌರ್ಜನ್ಯ ತಾಂಡವವಾಡುತ್ತಿದೆ. ಇತ್ತೀಚೆಗೆ ಉತ್ತರ ಭಾರತದ ರಾಜ್ಯವೊಂ ದರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ರಸ್ತೆಯಲ್ಲಿ ಕರೆದೊ ಯ್ಯುವ ದುಷ್ಟರಿಗೆ ಯಾವುದೇ ಶಿಕ್ಷೆ ನೀಡು ವಲ್ಲಿ ನಮ್ಮ ಅಡಳಿತ ಯಂತ್ರ ವಿಫಲ ವಾಗಿದೆ ಎಂದರು.
ವಿಕೃತ ಮನಸ್ಸಿನ ದುಷ್ಟರು ಎಲ್ಲಿಯ ತನಕ ಈ ರಾಷ್ಟ್ರದಲ್ಲಿ ಇರುತ್ತಾರೋ ಅಲ್ಲಿಯ ತನಕ ಸಾಮಾಜಿಕ ಸಮಾನತೆ ವುಳ್ಳ ಸ್ವಸ್ಥ್ಯ ಸಮಾಜ ಕಾಣಲು ಸಾಧ್ಯ ವಿಲ್ಲ ಎಂದರು.ಮತ್ತೊಬ್ಬ ರಾಜ್ಯ ಹಿರಿಯ ಮುಖಂಡ ಡಾ.ಜಿ.ಸೋಮಶೇಖರ್ ಮಾತನಾಡಿ, ಕೆಳಸ್ತರದ ಶೋಷಿತ ಸಮಾಜದವರಿಗೆ ಕಿಂಚಿತ್ತಾದರೂ ಸಾಮಾಜಿಕ ನ್ಯಾಯ ಒದ ಗಿಸಿಕೊಟ್ಟ ದಿಮಂತ ನಾಯಕರೆಂದರೆ ದಿವಂಗತ ದೇವರಾಜ ಅರಸರು. ಧ್ವನಿ ಇಲ್ಲ ದವರಿಗೆ ದ್ವನಿ ನೀಡುವ ಮೂಲಕ ಸಾಮಾ ಜಿಕ ವಲಯದಲ್ಲಿ ಶಕ್ತಿ ತುಂಬಿ ಜೀತ ಗಾರರನ್ನು ಮತ್ತು ಕೂಲಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡಿದ ಧೀಮಂತ ನಾಯಕ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ. ಪ್ರಜಾಸತ್ತತ್ಮಕ ಮೌಲ್ಯಗಳೊಂದಿಗೆ ಅಸಹಾಯಕರನ್ನು ಮುಂದೆ ತಂದರೆ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯ ಎಂದರು.
ಜಿಲ್ಲಾ ಸಂಚಾಲಕ ರತ್ನಪುರಿ ಪುಟ್ಟ ಸ್ವಾಮಿ ಮಾತನಾಡಿ, ಸಂವಿಧಾನವೆಂದರೆ ಅದು ಕೇವಲ ಶೋಷಿತ ಸಮುದಾಯ ಗಳಿಗೆ ಮೀಸಲಾತಿ ಮತ್ತು ಸವಲತ್ತು ನೀಡಲು ಮಾತ್ರ ಎಂದು ಬಿಂಬಿಸುತ್ತಿರುವ ಧಾರ್ಮಿಕ ದಲ್ಲಾಳಿಗಳ ಪಡೆ ದುರ್ಬಲ ಸಮುದಾಯ ಗಳ ಮೇಲೆ ಎತ್ತಿಕಟ್ಟಿ ಸಂವಿಧಾನವನ್ನೇ ಸುಡಲು ಹುನ್ನಾರ ನಡೆಸಿದೆ. ಇದರ ಪರಿ ಣಾಮವಾಗಿ ಈ ದೇಶದ ಬಹುದೊಡ್ಡ ಶೋಷಿತ ಸಮುದಾಯಗಳು, ಮಹಿಳೆ ಯರು, ಅಲ್ಪಸಂಖ್ಯಾತರು, ದಲಿತರು, ಮೂಲನಿವಾಸಿಗಳು ಯಾತನೆ ಅನುಭವಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದೇಶದ ಅಭಿವೃದ್ದಿಯನ್ನು ಕಡೆಗಣಿಸಿ ಹಿಂದೂ ರಾಷ್ಟ್ರ ನಿರ್ಮಾಣದ ಧಾವಂತ ದಲ್ಲಿ ಮತ್ತೆ ಊಳಿಗಮಾನ್ಯ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿರುವ ಶಾಸಕಾಂಗ ಮತ್ತು ಕಾರ್ಯಾಂಗಗಳ ಕಾರ್ಯ ವೈಖರಿಗೆ ಕಡಿವಾಣ ಹಾಕಿ, ಜಾತ್ಯತೀತ, ಧರ್ಮಾತೀತ, ಸಂವಿಧಾನದ ಆಶಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲು ನಿರ್ದೇಶನ ನೀಡಬೇಕಾಗಿದ್ದ ನ್ಯಾಯಾಂಗವೂ ಇತ್ತೀಚೆಗೆ ಶೋಷಿತ ಸಮುದಾಯಗಳ ಪ್ರಕರಣಗಳಲ್ಲಿ ನೀಡುತ್ತಿರುವ ತೀರ್ಪುಗಳು ಸಂವಿಧಾನದ ವ್ಯಾಖ್ಯಾನವನ್ನೇ ಬದಲಿಸು ವಂತಿವೆ ಎಂದರು.
ಇಂತಹ ಆಧುನಿಕ ಮನುವಾದದ ಆಕ್ರಮಣವನ್ನು ಹಿಮ್ಮೆಟ್ಟಿಸಿ ಭಾರತದ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಸ್ಥಿತ್ಯಂತರಗಳಿಗೆ ಪ್ರತ್ಯುತ್ತರ ನೀಡಬೇಕಾಗಿದ್ದ ದಲಿತ ಚಳವಳಿಗಳು ಮನುವಾದಿ ಶಕ್ತಿಗಳು ಸೃಷ್ಟಿಸುತ್ತಿರುವ ಹುನ್ನಾರಗಳ ಅರಿವಿದ್ದರೂ ಸ್ಪಷ್ಟ ಮಾರ್ಗ ಕಂಡುಕೊಳ್ಳುವಲ್ಲಿ ಗೊಂದಲ ಕ್ಕೊಳಗಾಗಿವೆ. ಇದರ ಅರಿವಿಗಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ರಾಜ್ಯ ಹಿರಿಯ ಮುಖಂಡ ಎನ್.ವೆಂಕ ಟೇಶ್, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಉಮಾ ಮಹದೇವ್, ಬಿ.ಡಿ. ಶಿವಬುದ್ಧಿ, ರತ್ನಪುರಿ ಡೇವಿಡ್, ಮಹ ದೇವಮ್ಮ, ಶಿವಕುಮಾರ್ ಮತ್ತಿತರರು ಹಾಜರಿದ್ದರು.