ಮೈಸೂರು, ಆ.17(ಎಂಟಿವೈ)- ಮೈಸೂರಿನ ಸರಸ್ವತಿಪುರಂನಲ್ಲಿರುವ ಜ್ಞಾನೋ ದಯ ಪದವಿ ಪೂರ್ವ ಕಾಲೇಜಿನಲ್ಲಿ ಆ.24ರಂದು ಬೆಳಗ್ಗೆ 9ರಿಂದ 5ರವರೆಗೆ ಅಂತರ ಶಾಲಾ ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಟಿ.ಎಸ್.ಶ್ರೀಕಂಠ ಶರ್ಮ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಒಲವು, ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಮೂಡಿಸಲು ನಗರದ ಆರ್ಐ ಐಐಟಿ ಸಂಸ್ಥೆ ಸಹಯೋಗ ದಲ್ಲಿ ಮೇಳ ಏರ್ಪಡಿಸಲಾಗಿದೆ. ವಿಜ್ಞಾನದ ಮಾದರಿಗಳ ಪ್ರದರ್ಶನವೂ ಮೇಳದಲ್ಲಿರು ತ್ತದೆ. ಸವಾಲುಗಳು ಹಾಗೂ ಸಮಸ್ಯೆಗೆ ಪರಿಹಾರಕ್ಕೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ನೆರೆ ಹಾವಳಿ, ಪ್ರವಾಹ, ಮಳೆ ಹಾನಿ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ತಡೆಗಟ್ಟಲು ವಿಜ್ಞಾನದ ಮೂಲಕ ಕೈಗೊಳ್ಳಬೇಕಾದ ಕ್ರಮ ಕುರಿತು ವಿದ್ಯಾರ್ಥಿಗಳು ಮಾದರಿ ತಯಾರಿಸಿ ಪ್ರದರ್ಶಿಸಲಿದ್ದಾರೆ. ಉತ್ತಮ ವಿಜ್ಞಾನ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಚಂದ್ರಯಾನ-1ರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅವರು ವಿಜ್ಞಾನ ಮೇಳವನ್ನು ಉದ್ಘಾಟಿಸಲಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೇಳದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಮಧ್ಯಾಹ್ನ 3ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.