ಮೈಸೂರು: ಭತ್ತ, ರಾಗಿ ಹಾಗೂ ಇನ್ನಿತರ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿರುವುದು ವೈಜ್ಞಾನಿಕವಲ್ಲ.
ಚುನಾವಣಾ ಪೂರ್ವದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು, ಉತ್ಪಾದನಾ ವೆಚ್ಚ ಹಾಗೂ ಅದರ ಅರ್ಧ ಭಾಗ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿ, ಈಗ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಸಾಧ್ಯವಿಲ್ಲದಂತಹ ಬೆಲೆ ನಿಗದಿ ಮಾಡಿರುವುದು, ಹೆಚ್ಚಿನ ಸಹಕಾರಿಯಾಗಲಾರದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೆಂದ್ರ ಬಜೆಟ್ನಲ್ಲಿಯು ಒಂದೂವರೆ ಪಟ್ಟು ಬೆಂಬಲ ಬೆಲೆ ಏರಿಸುವ ಭರವಸೆ ನೀಡಿ ಹುಸಿಯಾಗಿದೆ. ಈರುಳ್ಳಿ ಟೊಮೆಟೊ, ಆಲೂಗೆಡ್ಡೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರದ ವತಿಯಿಂದ ಖರೀದಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ, ಬೆಲೆ ಕುಸಿತವಾದಾಗ ಖರೀದಿ ಕೇಂದ್ರಗಳ ಮೂಲಕ ಖರೀದಿಸುವ ವ್ಯವಸ್ಥೆ ಮಾಡಲು ಮುಂದಾಗಬೇಕು ಎಂದು ಕುರುಬೂರು ಶಾಂತಕುಮಾರ್ ರಾಜ್ಯಾಧ್ಯಕ್ಷರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿಳಿಸಿದ್ದಾರೆ.