ಮಹಿಳೆಗೆ ವಂಚಿಸಲೆತ್ನಿಸಿದ ಗುಡ್ಡಪ್ಪನಿಗೆ ಗೂಸಾ
ಮೈಸೂರು

ಮಹಿಳೆಗೆ ವಂಚಿಸಲೆತ್ನಿಸಿದ ಗುಡ್ಡಪ್ಪನಿಗೆ ಗೂಸಾ

May 21, 2019

ಮೈಸೂರು: ಮಕ್ಕಳಾಗುವಂತೆ ಮಂತ್ರ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಲೆತ್ನಿಸಿದ ಶನಿದೇವರ ಗುಡ್ಡಪ್ಪನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಂಜನಗೂಡು ತಾಲೂಕು, ನಲ್ಲಿನಾಥ ಪುರ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ವೆಂಕಟೇಶ್ ನಾಯಕ(23) ಎಂಬುವರೇ ಮಹಿಳೆಗೆ ವಂಚಿಸಲೆತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದು ಜಯಪುರ ಪೊಲೀಸರ ಅತಿಥಿಯಾಗಿ ರುವ ಯುವಕ. ಪಿಯುಸಿ ಫೇಲಾಗಿ ರುವ ಈತ, ಶನಿದೇವರ ಗುಡ್ಡಪ್ಪನ ವೇಷ ಧರಿಸಿ ಅವತಾರ ತಾಳಿದ್ದ.

ತನ್ನ ಮೇಲೆ ದೇವರು ಬರುತ್ತದೆ ಎಂಬಂತೆ ನಟಿಸಿ ಅಮಾಯಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದ.
ಆತನ ವರ್ತನೆಯಿಂದ ಮಾರುಹೋದ ಗ್ರಾಮಸ್ಥರೂ ಸಹ ನಂಬಿದ್ದರು. ಈ ವಿಷಯ ತಿಳಿದ ಮಂಡನಹಳ್ಳಿಯ ಮಹಿಳೆಯರೊಬ್ಬರು ನೆಲ್ಲಿನಾಥಪುರಕ್ಕೆ ತೆರಳಿ ತನಗೆ ಮಕ್ಕಳಾಗಿಲ್ಲ, ಪೂಜೆ ಮಾಡಿಕೊಡಿ ಎಂದು ಶನಿವಾರ ಕೋರಿದ್ದರು.

ನಾನೇ ನಿನ್ನ ಮನೆಗೆ ಬಂದು ಪೂಜೆ ಮಾಡಬೇಕೆಂದು ಹೇಳಿದ ವೆಂಕಟೇಶನ ಮಾತು ನಂಬಿದ ಆಕೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಮಂಡನ ಹಳ್ಳಿಗೆ ಬಂದು ಆತ ಮಾತನಾಡಿದ. ನನ್ನ ಜೊತೆ ಬಂದು ಒಂದು ದಿನ ಧರ್ಮಸ್ಥಳ ದಲ್ಲಿ ಉಳಿದರೆ ನಿನಗೆ ಮಕ್ಕಳಾಗುತ್ತದೆ ಎಂದು ಆತ ಹೇಳಿದ ಎನ್ನಲಾಗಿದೆ.

ಅಷ್ಟರಲ್ಲಾಗಲೇ ಆಕೆ ಮನೆ ಮುಂದೆ ಜಮಾಯಿಸಿದ್ದ ಜನರಿಗೆ ಆತ ಸುಳ್ಳು ಹೇಳಿ ವಂಚಿಸುತ್ತಿದ್ದಾನೆಂಬ ವಿಷಯ ತಿಳಿದು ವೆಂಕಟೇಶ ನಾಯಕನನ್ನು ಮನೆಯಿಂದ ಹೊರಕ್ಕೆಳೆದು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ನಂತರ ಜಯಪುರ ಠಾಣೆ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ. ದೂರು ನೀಡಿ ಎಂದು ಕೇಳಿದರೂ ಗ್ರಾಮದಲ್ಲಿ ಯಾರೂ ಮುಂದೆ ಬಾರದ ಕಾರಣ ಪೊಲೀಸರು ಆತನನ್ನು ಕರೆದೊಯ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Translate »