ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಮಹಿಳೆ ಸಾವು ಮತ್ತೊಬ್ಬರಿಗೆ ತೀವ್ರ ಗಾಯ
ಚಾಮರಾಜನಗರ

ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಮಹಿಳೆ ಸಾವು ಮತ್ತೊಬ್ಬರಿಗೆ ತೀವ್ರ ಗಾಯ

February 21, 2019

ಚಾಮರಾಜನಗರ: ವಾಯು ವಿಹಾರಕ್ಕೆ ತೆರಳಿದ್ದವರಿಗೆ ಬೈಕ್ ಡಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ದೊಡ್ಡ ರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ಗುರುಸಿದ್ದಯ್ಯ ಪತ್ನಿ ನಂಜಮ್ಮ (42) ಮೃತಪಟ್ಟವರು. ಅದೇ ಗ್ರಾಮದ ಕುಮಾರ್ ಎಂಬುವವರು ತೀವ್ರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂಜಮ್ಮ, ಕುಮಾರ ಮತ್ತು ಮತ್ತೊಬ್ಬರು ವಾಯುವಿಹಾರದಲ್ಲಿ ತೊಡಗಿದ್ದರು. ಇವರು ದೊಡ್ಡರಾಯಪೇಟೆ ಕ್ರಾಸ್ ಕಡೆಯಿಂದ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಇವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ವಾಗಿ ಗಾಯಗೊಂಡ ನಂಜಮ್ಮ ಸ್ಥಳದಲ್ಲಿಯೇ ಮೃತಪಟ್ಟರು. ಕುಮಾರ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬರು ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಸವಾರ ದೊಳ್ಳಿಪುರ ಗ್ರಾಮದ ಮುತ್ತುರಾಜ್ ಎಂಬವರಾಗಿದ್ದು, ಬೆಳಗಿನ ಜಾವ ಕತ್ತಲೆ ಆವರಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »