ಕ್ಯಾಂಟರ್ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯ

ಕ್ಯಾಂಟರ್ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ

January 13, 2020

ಮಂಡ್ಯ, ಜ.12(ನಾಗಯ್ಯ)- ಕ್ಯಾಂಟರ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ರುವ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.

ದರ್ಶನ್, ಕೊಮ್ರೇಶ್, ತಿಮ್ಮೇಗೌಡ, ರಾಜಮ್ಮ, ಸರೋಜ, ರತ್ನಮ್ಮ, ರವಿ, ಮಾದೇಗೌಡ, ಸುರೇಶ್, ವಸಂತ್, ಸುಶೀಲಮ್ಮ, ಕಾಳಮ್ಮ ಅವರನ್ನೊಳಗೊಂಡಂತೆ 30 ಮಂದಿ ಗಾಯಗೊಂಡಿದ್ದು ಇವರೆಲ್ಲರೂ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದವರೆಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಸುಮಾರು 50 ಮಂದಿ ಕ್ಯಾಂಟರ್(ಕೆಎ-51 ಡಿ-0035)ನಲ್ಲಿ ಮುತ್ತತ್ತಿಯ ಅಂಜನೇಯಸ್ವಾಮಿ ಪೂಜೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಮಧ್ಯಾಹ್ನ 12.45 ರಲ್ಲಿ ಮುತ್ತತ್ತಿ ಇನ್ನೂ 7 ಕಿಮೀ ದೂರದಲ್ಲಿರುವ ಅರಣ್ಯ ಪ್ರದೇಶದ ಮಾರ್ಗದಲ್ಲಿ ವೇಗವಾಗಿ ತೆರಳುತ್ತಿದ್ದ ಕ್ಯಾಂಟರ್ ರಸ್ತೆಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಪರಿಣಾಮ ಕ್ಯಾಂಟರ್‍ನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಕೆಲವರಿಗೆ ಕೈ ಕಾಲು ಮೂಳೆ ಮುರಿದರೆ, ಮಕ್ಕಳ ತಲೆಗೆ ಪೆಟ್ಟು ಬಿದ್ದಿದೆ. ಮತ್ತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವೈದ್ಯರೇ ಇರಲಿಲ್ಲ: ಗಾಯಾಳುಗಳನ್ನು ಹಲಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಾಗ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ. ಇದರಿಂದಾಗಿ ಕೆಲಕಾಲ ಗಾಯಾಳು ಸಂಬಂಧಿಗಳು ಪರದಾಡುವ ಸ್ಥಿತಿ ಎದುರಾಯಿತು. ಆದರೂ ಆಸ್ಪತ್ರೆಯಲ್ಲಿದ್ದ ಒಂದಿಬ್ಬರು ನರ್ಸ್ ಮತ್ತು ಅಟೆಂಡರ್‍ಗಳೇ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಖಾಸಗಿ ವಾಹನದಲ್ಲಿಯೇ ಮಂಡ್ಯ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಕಳುಹಿಸಿಕೊಡಲಾಯಿತು.

ಸುದ್ದಿ ತಿಳಿದು ಹಲಗೂರು ಪೆÇಲೀಸ್ ಠಾಣೆ ಸಿಪಿಐ ಮಂಜುನಾಥ್, ಎಸ್‍ಐ ಪುರುಷೋತ್ತಮ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಹಲಗೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »