ಹೆಚ್.ಡಿ.ಕೋಟೆ: ಕಬಿನಿ ಜಲಾಶಯದ ಬಳಿ ನಾಲ್ಕು ವರ್ಷದ ಗಂಡು ಚಿರತೆ ಮೃತದೇಹ ಪತ್ತೆಯಾಗಿದ್ದು, ಅದರ ಎಂಟು ಉಗುರುಗಳು ಕಾಣೆಯಾಗಿರುವುದರಿಂದ ಅದನ್ನು ಬೇಟೆಗಾರರು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಕಬಿನಿ ಜಲಾಶಯದ ಮುಖ್ಯದ್ವಾರದ ಸಮೀಪ ಹೊಳೆಯಲ್ಲಿ ತೇಲಿ ಬಂದ ಚಿರತೆ ಮೃತದೇಹ ದಡ ಸೇರಿದೆ. ವಿಚಾರ ತಿಳಿದು, ಸ್ಥಳಕ್ಕೆ ಹೆಚ್.ಡಿ.ಕೋಟೆ ಆರ್ಎಫ್ಓ ಮಧು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಡಾಕ್ಟರ್ ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ದೇಹವನ್ನು ಜಲಾಶಯದ ಬಳಿ ಸುಡಲಾಯಿತು, ಕಳೆದ ಮೂರು ದಿನಗಳ ಹಿಂದೆಯೂ ತಾಲೂಕಿನ ಎನ್.ಬೆಳತ್ತೂರು ಬಳಿ ಕಬಿನಿ ಹಿನ್ನೀರಿನಲ್ಲಿ ಹುಲಿ ದೇಹ ಪತ್ತೆಯಾಗಿತ್ತು, ಅದರ ಮರಣೋತ್ತರ ಪರೀಕ್ಷೆ ವೇಳೆಯಲ್ಲೂ ಅದರ ಉಗುರುಗಳು ಕಾಣೆಯಾಗಿದ್ದ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಕಬಿನಿ ಜಲಾಶಯದ ಬಳಿ ಸಾವನ್ನಪ್ಪಿದ ಗಂಡು ಚಿರತೆಯ ಎರಡು ಉಗುರುಗಳು, ಕಾಣೆ ಯಾಗಿವೆ. ಇವೆಲ್ಲವೂ ಅನುಮಾನಕ್ಕೆ ಎಡೆ ಆಗಿದೆ.
ಈ ಸಂದರ್ಭದಲ್ಲಿ ಡಿಎಫ್ಓ ಹನುಮಂತಪ್ಪ, ಹೆಚ್.ಡಿ.ಕೋಟೆ ಎಸಿಎಫ್ ಪರಮೇಶ್ವರಪ್ಪ, ಎಸ್ಟಿಎಪ್ಆರ್ಎಫ್ಓ ಸಂತೋಷ, ಡಿಆರ್ ಎಫ್ಓ ಮಂಜು, ಸಿಬ್ಬಂದಿಗಳಾದ ರಾಜೇಶ್, ಸುರೇಶ್, ಲಾಲಪ್ಪ ಹಾಜರಿದ್ದರು.