ದರ್ಶನ್ ಮನವಿಗೆ ಮಣಿದು ದಾರಿ ಬಿಟ್ಟುಕೊಟ್ಟ ಬಸವ!
ಮೈಸೂರು

ದರ್ಶನ್ ಮನವಿಗೆ ಮಣಿದು ದಾರಿ ಬಿಟ್ಟುಕೊಟ್ಟ ಬಸವ!

April 12, 2019

ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ್ ಬಹಳ ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಕೆಆರ್ ನಗರದಲ್ಲಿ ಅವರು ಪ್ರಚಾರ ಕೈಗೊಂಡಿದ್ದಾಗ ಈ ಅಂಶ ಮತ್ತೊಮ್ಮೆ ದೃಢಪಟ್ಟಿದೆ.

ಕೆಆರ್ ನಗರದಲ್ಲಿ ಬುಧವಾರ ರೋಡ್‍ಶೋ ನಡೆಸಿದ್ದಾಗ ದರ್ಶನ್ ಅವರಿದ್ದ ವಾಹನದ ಮುಂದೆ ಬಲು ಎತ್ತರದ, ಬಿಳಿಯ ಬಣ್ಣದ ಬಸವ ಬಂದಿತು. ದೊಡ್ಡ ಕೊಂಬಿನ ಆ ಬಸವ ಜನರ ಗುಂಪಿನ ನಡುವೆ ನಿಂತು ಮುಂದೆ ಸಾಗಲು ನಿರಾಕರಿಸಿತು. ಅಲ್ಲಿ ನೆರೆದಿದ್ದವರು ಬಸವನನ್ನು ಬದಿಗೆ ಸರಿಸಲು ಯತ್ನಿಸಿದರೂ ಅದು ಸ್ವಲ್ಪವೂ ಕದಲಲಿಲ್ಲ.

ಆಗ ಪ್ರಚಾರ ವಾಹನದಿಂದ ಕೆಳಗಿಳಿದ ದರ್ಶನ್, ತಮ್ಮ ಬಾಯಿಯ ಮೇಲೆ ಬೆರಳಿಟ್ಟು, `ಗಲಾಟೆ ಮಾಡಬೇಡಿ’ ಎಂದು ಅಭಿಮಾನಿಗಳಿಗೂ ಸೂಚಿಸುತ್ತಲೇ ಬಸವನ ಬಳಿ ಸಾಗಿದರು. ನೆಲಕ್ಕೆ ಕಾಲು ಕೀಲಿಸಿದಂತೆ ನಿಂತಿದ್ದ ಬಸವಣ್ಣನ ಬೆನ್ನಿನ ಮೇಲೆ ಕೈಯಿಟ್ಟ ದರ್ಶನ್ ಮೆಲ್ಲಗೆ ಅದರ ಮೈದಡವಿ ಮಾತನಾಡಿಸಿದರು. ಆಗ ಅಭಿಮಾನಿಗಳು ಓ ಎಂದು ಕೂಗೆಬ್ಬಿಸಿದರು. ಜನರ ಗದ್ದಲ ದಿಂದ ತನ್ನ ಏಕಾಗ್ರತೆಗೆ ಭಂಗವಾಯಿತು ಎಂಬಂತೆ ಬಸವ, ತನ್ನ ಉದ್ದ ಕೊಂಬಿನ ಮೊಗವನ್ನು ಬಲಬದಿಗೆ ಒಮ್ಮೆ ತಿರುಗಿಸಿ ಜೋರಾಗಿ ಉಸಿರು ಬಿಟ್ಟಿತು. ಅಷ್ಟಕ್ಕೆ ಅದರ ಸುತ್ತ ನೆರೆದಿದ್ದವರು ಒಂದೆಜ್ಜೆ ಹಿಂದಕ್ಕೆ ಜಿಗಿದರು.

ಅಭಿಮಾನಿಗಳನ್ನು ಗದರಿಸಿ ಸುಮ್ಮನಾಗಿಸಿದ ದರ್ಶನ್, ಮತ್ತೆ ಬಸವನ ಭುಜವನ್ನು ಸವರಿ ಮುಂದೆ ಹೋಗಪ್ಪ ಎಂದು ಪಿಸುದನಿಯಲ್ಲಿ ಹೇಳಿ ಬಂದು ವಾಹನವೇರಿದರು. ದರ್ಶನ್ ಮನವಿ ಅರ್ಥವಾದಂತೆ ಕಂಡ ಬಸವಣ್ಣ, ತಕ್ಷಣವೇ ಮುಂದೆ ಸಾಗಿ ಹೋಯಿತು. ಈ ದೃಶ್ಯ ಕಂಡು ರೋಮಾಂಚನÀ ಗೊಂಡ ದರ್ಶನ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಇದಿಷ್ಟೂ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಸಾಕಷ್ಟು ಲೈಕ್‍ಗಳನ್ನೂ ಪಡೆದುಕೊಂಡಿದೆ.

Translate »