ಬೆಂಗಳೂರು,ಜ.9- ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾನಾ ಆಯಾಮಗಳ ತುಲನೆಯಲ್ಲಿ ಹೈಕಮಾಂಡ್ ತೊಡಗಿದೆ. ಮುಂದಿನ ಮೂರು ವರ್ಷಗಳ ದೀರ್ಘಾವಧಿಯಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಸಮರ್ಥ ಸಾರಥಿಗೆ ಪಟ್ಟ ಕಟ್ಟುವ ವಿಚಾರದಲ್ಲಿ ಪರ್ಯಾಯ ಆಯ್ಕೆಗಳ ಪರಿಶೀಲನೆ ನಡೆದಿದೆ.
ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾ ಚಾತು ರ್ಯದ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ಗೆ ಕೆಪಿಸಿಸಿ ಸಾರಥ್ಯ ವಹಿಸಲು ಹೈಕಮಾಂಡ್ ಬಯಸಿತ್ತು. ಆದರೆ, ಪ್ರಭಾವಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯವನ್ನು ಮರಳಿ ಪಕ್ಷದ ತೆಕ್ಕೆಗೆ ಸೆಳೆ ಯುವುದೂ ಒಳಗೊಂಡು ಜಾತಿ, ಪ್ರದೇಶ ಸಮೀ ಕರಣ ಆಧರಿಸಿ ಜವಾಬ್ದಾರಿ ನೀಡುವ ಸಂಬಂಧ ವರಿಷ್ಠರು ಹೊಸ ಆಲೋಚನೆಯಲ್ಲಿದ್ದಾರೆ.
ಖಂಡ್ರೆ ಅಥವಾ ಎಂ.ಬಿ.ಪಾಟೀಲ್: ಸದ್ಯ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಪರ ಇರುವ ಲಿಂಗಾ ಯತರ ಕೋಟೆಗೆ ಲಗ್ಗೆ ಹಾಕಲು ಕಾರ್ಯಾ ಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಬಡ್ತಿ ನೀಡಿದರೆ ಹೇಗೆ? ಅಥವಾ ಎಂ.ಬಿ.ಪಾಟೀಲ್ ಅವ ರನ್ನೇ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ದರೆ ಸೂಕ್ತವಾಗಬಹುದು. ಇದರಿಂದ ವಿಶೇಷವಾಗಿ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ವನ್ನು ಮರಳಿ ಪಕ್ಷದ ತೆಕ್ಕೆಗೆ ಸೆಳೆಯಲು ಸಾಧ್ಯವಾಗ ಬಹುದು ಎಂಬ ಲೆಕ್ಕಾಚಾರದಿಲ್ಲಿ ಹೈಕಮಾಂಡ್ ಅಂಗಳದಲ್ಲಿ ನಡೆದಿದೆ ಎನ್ನಲಾಗಿದೆ.
ಪಕ್ಷಕ್ಕೆ ನಿಷ್ಟರಾದ ಡಿ.ಕೆ. ಶಿವಕುಮಾರ್ ಅವರನ್ನು ಸಂಭಾಳಿಸುವುದು ಕಷ್ಟವಲ್ಲ. ಕೆಪಿಸಿಸಿ ಅಧ್ಯಕ್ಷಗಾದಿ ಹಿಡಿದು 2023ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಹಂಬಲದಲ್ಲಿದ್ದರೂ ಹೈಕಮಾಂಡ್ ಸೂಚನೆಗೆ ವಿರುದ್ಧವಾಗಿ ಡಿ.ಕೆ.ಶಿವಕುಮಾರ್ ಹೋಗುವರಲ್ಲ. ಹೀಗಾಗಿ, ಅವರಿಗೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಸ್ಥಾನ, ಸಿಡಬ್ಯ್ಲೂಸಿ ಸದಸ್ಯತ್ವದಂತಹ ಬೇರೆ ಜವಾಬ್ದಾರಿಗಳನ್ನು ನೀಡಬಹುದೇ? ಕೆಪಿಸಿಸಿ ಅಧ್ಯಕ್ಷ ಗಾದಿ ಸಿಗದ ಮಾತ್ರಕ್ಕೆ ಒಕ್ಕಲಿಗ ಸಮುದಾಯದ ಮುಂದೆ ಡಿ.ಕೆ.ಶಿವಕುಮಾರ್ ನಗಣ್ಯರಾಗುವುದಿಲ್ಲ ಎಂಬ ಅಭಿಪ್ರಾಯವೂ ವರಿಷ್ಠರದ್ದಾಗಿದೆ.
ಉತ್ತರ ಕರ್ನಾಟಕದ ಲಿಂಗಾಯತರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ನೀಡಿ, ಡಿ.ಕೆ.ಶಿವಕುಮಾರ್ಗೆ ಬೇರೆಯ ಅವಕಾಶಗಳನ್ನು ನೀಡಬಹುದು. ಜತೆಗೆ, ಕೃಷ್ಣ ಬೈರೇಗೌಡ ಅವರಿಗೆ ಜವಾಬ್ದಾರಿ ನೀಡಿ ಒಕ್ಕಲಿಗ ಸಮುದಾಯವನ್ನು ಓಲೈಸ ಬಹುದು. ಪೌರತ್ವ ತಿದ್ದು ಪಡಿ ವಿಧೇಯಕದ ವಿರು ದ್ಧದ ಹೋರಾಟದ ಕಿಚ್ಚಿಗೆ ಬೆಂಬಲವಾಗಿ ನಿಂತ ಬಳಿಕ ಅಲ್ಪಸಂಖ್ಯಾತರು ವಿಶೇಷ ವಾಗಿ ಮುಸ್ಲಿಂ ಮತ ಬ್ಯಾಂಕ್ ಪಕ್ಷದ ಪರವಾಗಿ ಗಟ್ಟಿಯಾ ಗಿದೆ. ಈ ಸಮುದಾಯದ ನಾಯಕರೊಬ್ಬರಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಕಾರ್ಯಾ ಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿಯಂಥ ಬೇರೊಂದು ಮಹತ್ವದ ಜವಾಬ್ದಾರಿ ನೀಡಬಹುದು. ಈ ಎಲ್ಲಾ ಲೆಕ್ಕಾಚಾರ, ಚಿಂತನೆಗಳು ಎಐಸಿಸಿ ವರಿಷ್ಠರ ಮುಂದಿವೆ ಎಂದು ಪಕ್ಷದ ಮೂಲಗಳು ಹೇಳಿವೆ.
ಚಿಂತನೆಗೆ ಹಚ್ಚಿದ ಮಿಸ್ತ್ರಿ ವರದಿ: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಮಧುಸೂದನ್ ಮಿಸ್ತ್ರಿ ಸಲ್ಲಿಸಿರುವ ವರದಿ ವರಿಷ್ಠರ ತಲೆಕೆಡಿಸಿದೆ. ಪರ್ಯಾಯ ಆಯಾಮಗಳ ಕುರಿತು ಚಿಂತಿಸಲು ಹೈಕಮಾಂಡ್ಗೆ ಮಿಸ್ತ್ರಿ ವರದಿ ಪ್ರೇರಣೆಯಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಅವಕಾಶಗಳೆಲ್ಲವೂ ಇವೆ ಮತ್ತು ಅದಕ್ಕೆ ಪೂರಕವಾದ ನಾಯಕರೂ ಇದ್ದಾರೆ. ಆದರೆ, ಪರಸ್ಪರ ಕಾಲೆಳೆಯುವ ಈ ನಾಯ ಕರ ನಡುವೆ ಬೆಸುಗೆ ಹಾಕದ ಹೊರತು ಯಾರಿಗೇ ಪಟ್ಟ ಕಟ್ಟಿದರೂ ಯಶಸ್ಸು ನಿರೀಕ್ಷಿಸಲಾಗದು ಎಂಬುದು ಮಿಸ್ತ್ರಿ ವರದಿಯ ತಾತ್ಪರ್ಯ. ಪರಸ್ಪರ ಕಾಲೆಳೆಯುವ, ದೂರು ಹೇಳುವ ನಾಯಕರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಒಟ್ಟಿಗೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಅಗತ್ಯವನ್ನು ಮಿಸ್ತ್ರಿ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರನ್ನೇ ಅಧ್ಯಕ್ಷರಾಗಿ ಮಾಡಿ ದರೆ ಸಿದ್ದರಾಮಯ್ಯ ಬಣದ ಸಹಕಾರ ಸಿಗದೆ ಮತ್ತದೇ ಗುಂಪುಗಾರಿಕೆ ಮುಂದುವರಿಯಲು ಅವಕಾಶ ವಾಗ ಬಹುದು. ಡಿ.ಕೆ.ಶಿವಕುಮಾರ್ ನಾಯಕತ್ವಕ್ಕೆ ಸಾಥ್ ಕೊಡದೆ ಸಿದ್ದರಾಮಯ್ಯ ನಿರ್ಲಿಪ್ತರಾಗಿ ಉಳಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂಬ ಅಭಿಪ್ರಾಯವೂ ಹೈಕಮಾಂಡ್ಗೆ ತಲುಪಿದೆ. ಹೀಗಾಗಿ, ಪರ್ಯಾಯ ಸಾಧ್ಯತೆಗಳ ಗಂಭೀರ ಚಿಂತನೆಯಲ್ಲಿರುವ ಎಐಸಿಸಿ ವರಿಷ್ಠರು, ಮಿಸ್ತ್ರಿ ವರದಿ ಆಧರಿಸಿಯೇ ಮತ್ತೊಮ್ಮೆ ಆಯ್ದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲು ಬಯಸಿದ್ದಾರೆ.