ಪ್ರತಿಯೊಬ್ಬರು ಭಾರತದ ಸಂವಿಧಾನ ಓದುವುದು ಅವಶ್ಯ
ಮೈಸೂರು

ಪ್ರತಿಯೊಬ್ಬರು ಭಾರತದ ಸಂವಿಧಾನ ಓದುವುದು ಅವಶ್ಯ

December 14, 2018

ಮೈಸೂರು: ಭಾರ ತದ ಸಂವಿಧಾನವನ್ನು ಪ್ರತಿಯೊಬ್ಬರೂ ಓದುವುದು ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ ಎಂದು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಹೇಳಿದರು.

ಆಡಳಿತ ತರಬೇತಿ ಸಂಸ್ಥೆಯಲ್ಲಿ ಗುರು ವಾರ ಆಯೋಜಿಸಿದ್ದ ಸಂವಿಧಾನ ಓದು ಮತ್ತು ಸಾಮಾಜಿಕ ನ್ಯಾಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಅರ್ಥಮಾಡಿಕೊಳ್ಳ ಬೇಕಾದರೆ ಮೊದಲು ನಾವು ಭಾರತ ವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಭಾರತವನ್ನು ಸರಿಯಾಗಿ ಓದದಿದ್ದರೆ ಸಂವಿಧಾನದ ಆಶಯ ಮತ್ತು ಪಾವಿತ್ರ್ಯತೆ ಅರ್ಥವಾಗುವುದಿಲ್ಲ ಎಂದು ಹೇಳಿದರು.

ಹಿಂದೂಗಳಿಗೆ ಪವಿತ್ರ ಗ್ರಂಥವಾಗಿ ಭಗವದ್ಗೀತೆ, ಮುಸ್ಲಿಮರಿಗೆ ಖುರಾನ್, ಸಿಖ್ಖರಿಗೆ ಗ್ರಂಥ ಸಾಹೇಬ, ಕೈಸ್ತರಿಗೆ ಬೈಬಲ್ ಹೀಗೆ ವಿವಿಧ ಧರ್ಮಗಳಿಗೆ ವಿವಿಧ ಗ್ರಂಥ ಗಳಿವೆ. ಈ ಎಲ್ಲ ಧರ್ಮೀಯರು ನೆಲೆಸಿ ರುವ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ ಎಂದು ಹೇಳಿದರು.

ಐದು ಸಾವಿರ ವರ್ಷಗಳಿಂದ ಹಲವು ಜನಾಂಗದವರು, ಭಾಷಿಕರು ಭಾರತಕ್ಕೆ ವಲಸೆ ಬಂದು ನೆಲೆಸಿದ್ದಾರೆ. ಹಾಗಾಗಿ ವಿವಿಧ ಜಾತಿ, ಭಾಷೆ, ಬಣ್ಣ ಮುಂತಾದ ವೈವಿಧ್ಯತೆಯುಳ್ಳ ಜನರಿದ್ದಾರೆ. ಇವರೆಲ್ಲರ ಗೌರವಯುತ ಬದುಕಿಗೆ ಸಂವಿಧಾನ ಆಧಾರವಾಗಿದೆ ಎಂದರು.

ಭಾರತ ಸಂವಿಧಾನದಲ್ಲಿ 60ಕ್ಕೂ ಹೆಚ್ಚು ದೇಶಗಳ ಸಂವಿಧಾನದ ಒಳ್ಳೆಯ ಅಂಶ ಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕಾದ ನಾಗರಿಕ ಹೋರಾಟ, ಫ್ರಾನ್ಸ್ ಕ್ರಾಂತಿಯ ಭ್ರಾತೃತ್ವ, ಸಮಾನತೆ, ರಷ್ಯಾದ ಲೆನಿನ್ ತತ್ವದ ಕಾರ್ಮಿಕರ ಮಹತ್ವ ಒಳಗೊಂಡ ಸಮಾಜವಾದಿ ತತ್ವವನ್ನು ಸೇರಿಸಲಾಗಿದೆ ಎಂದು ವಿವರಿಸಿದರು.
ಸಂವಿಧಾನ ಜಾರಿಗೆ ಬಂದು 68 ವರ್ಷ ಗಳಾದರೂ ಸಂವಿಧಾನವನ್ನು ಸರಿಯಾಗಿ ಓದಿಲ್ಲ. ಇಂದಿಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳಿಗೆ ಸಂವಿ ಧಾನದ ಜ್ಞಾನ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ತರಬೇತಿ ಪಡೆಯುತ್ತಿರುವ ಡಿವೈಎಸ್‍ಪಿ ಪ್ರಶಿಕ್ಷಣಾರ್ಥಿ ಗಳು ಹಾಗೂ ಬಂಧೀಖಾನೆ ಅಧೀಕ್ಷಕ ಪ್ರಶಿಕ್ಷಣಾರ್ಥಿಗಳು `ಮಹಿಳಾ ಸಬಲೀ ಕರಣ ಮತ್ತು ಮಹಿಳಾ ಸಂವೇದನೆ’ ನಾಟಕ ಪ್ರದರ್ಶನ ಮಾಡಿದರು.

ಚಿಂತಕ ದೇವನೂರು ಮಹಾದೇವ, ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Translate »