ಮಳವಳ್ಳಿ, ಡಿ.18- ತಾಲೂಕಿನ ಭಾರತೀನಗರದಲ್ಲಿ ಡಿ.23ರಂದು ರೈತರ ಬೃಹತ್ ಸಮಾವೇಶ ಹಾಗೂ ‘ಕಾಯಕ ಯೋಗಿ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ತಾಲೂಕು ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ.23ರಂದು ರಾಷ್ಟ್ರದಾದ್ಯಂತ ಚೌದರಿ ಚರಣ್ಸಿಂಗ್ ಅವರ ಹುಟ್ಟುಹಬ್ಬವನ್ನು ವಿಶ್ವ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾಗಿ, ಭಾರತೀನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಹಯೋಗದಲ್ಲಿ ವಿಶ್ವ ರೈತ ದಿನಾಚರಣೆ, ದಿ.ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಎನ್.ಡಿ.ಸುಂದರೇಶ್ ಅವರ ನೆನಪಿನ ದಿನಾಚರಣೆ ಹಾಗೂ ರೈತರ ಬೃಹತ್ ಸಮಾವೇಶ, ಏರ್ಪಡಿಸಲಾಗಿದೆ. ರೈತ ಸಮುದಾಯ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಪದಾಧಿಕಾರಿಗಳ ಆಯ್ಕೆ: ವಳಗೆರೆದೊಡ್ಡಿ ಶ್ರೀನಿವಾಸ್, ಅಂಚೆದೊಡ್ಡಿ ಸಿದ್ದೇಗೌಡ (ಗೌರವಾಧ್ಯಕ್ಷ), ಬಾಣಸಮುದ್ರ ದೇವರಾಜು (ಅಧ್ಯಕ್ಷ), ಮಳವಳ್ಳಿ ನಾಗರಾಜು, ಪುಟ್ಟೇಗೌಡ, ಸಣ್ಣಶೆಟ್ಟಿ, ಚನ್ನೇಗೌಡ(ಉಪಾಧ್ಯಕ್ಷ), ಕೆ.ಜಿ.ಬಸವರಾಜು (ಪ್ರಧಾನ ಕಾರ್ಯ ದರ್ಶಿ), ನೆಲ್ಲೂರು ಜಯರಾಮು (ಖಜಾಂಚಿ), ಎಂ.ಲಿಂಗೇಗೌಡ (ಸಂಚಾಲಕ)ರಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಬುನಹಳ್ಳಿ ಸುರೇಶ, ರಾಜ್ಯ ಸಮಿತಿಯ ಸಂಘಟನೆ ಕಾರ್ಯದರ್ಶಿ ಯರಗನಹಳ್ಳಿ ರಾಮಕೃಷ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾಶಂಕರ್ ಸೇರಿದಂತೆ ನೂರಾರು ರೈತರು ಮುಖಂಡರು, ನೂತನ ಪದಾಧಿಕಾರಿಗಳು ಹಾಜರಿದ್ದರು.