ಮಹಿಳೆ ಸೇರಿ ಐವರ ಬಂಧನ
ಮಂಡ್ಯ

ಮಹಿಳೆ ಸೇರಿ ಐವರ ಬಂಧನ

January 19, 2019

ಮಂಡ್ಯ: ಮಳವಳ್ಳಿ ಕಿಡ್ನಿ ಮಾರಾಟ ದಂಧೆಗೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿ ಗಳನ್ನು ಬಂಧಿಸುವಲ್ಲಿ ಮಳವಳ್ಳಿ ಪೊಲೀ ಸರು ಯಶಸ್ವಿಯಾಗಿದ್ದಾರೆ.

ಮಳವಳ್ಳಿ ಮಾಸ್ತಮ್ಮ ಕೇರಿಯ ತಾರಾ ನಾಗೇಂದ್ರ, ರಾಮನಗರ ಟೌನ್ ಶಾಂತಿ ಲಾಲ್ ಲೇಔಟ್‍ನ ಅಡುಗೆ ಗುತ್ತಿಗೆ ದಾರ ಗೋಪಾಲ್(ಕಿಡ್ನಿ ಗೋಪಾಲ್), ಮಂಡ್ಯ ತಾಲೂಕಿನ ಹೊಳಲು ಗ್ರಾಮದ ವಡೆ, ಸಮೋಸ ವ್ಯಾಪಾರಿ ಜವರಯ್ಯ, ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದ ಹೂವಿನ ವ್ಯಾಪಾರಿ ರಾಜು ಹಾಗೂ ರಾಮನಗರ ಟೌನ್ ವಿಜಯನಗರದ ಗಾರೆ ಕೆಲಸಗಾರ ತಿಮ್ಮಯ್ಯ ಬಂಧಿತ ಆರೋಪಿಗಳು.

ತಮ್ಮ ಕಚೇರಿಯಲ್ಲಿಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್, ಜ.9ರಂದು ಮಳ ವಳ್ಳಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಮತ ಬೀದಿಯ ಮಲ್ಲಯ್ಯ ಎಂಬು ವವರ ಪತ್ನಿ ವೆಂಕಟಮ್ಮ ಅವರಿಗೆ ಅದೇ ಬೀದಿಯ ತಾರಾ ಎಂಬುವವಳು ಪತಿಗೆ ತಿಳಿಯದಂತೆ ಕಿಡ್ನಿ ಮಾರಾಟ ಮಾಡಿಸಿ 30 ಲಕ್ಷ ಹಣ ಕೊಡಿಸುವುದಾಗಿ ನಂಬಿಸಿ ಕಮಿಷನ್ 2.80 ಲಕ್ಷ ರೂ. ಮುಂಗಡವಾಗಿ ಕಮೀಷನ್ ಪಡೆದು ಮೋಸ ಮಾಡಿದ್ದಳು. ಇದರಿಂದ ಮನ ನೊಂದ ವೆಂಕಟಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತಳ ಪತಿ ಮಲ್ಲಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಮಳವಳ್ಳಿ ಪೊಲೀಸರು ಈಗ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಖಚಿತ ಮಾಹಿತಿ ಮೇರೆಗೆ ಜ.17ರಂದು ರಾಮನಗರ ಟೌನ್ ಶಾಂತಿಲಾಲ್ ಲೇಔಟ್‍ನ ಗೋಪಾಲ್ ಮನೆಯಲ್ಲಿ ಆರೋ ಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆರೋಪಿ ಮಹಿಳೆ ತಾರಾ ಹಾಗೂ ಆಕೆಯ ಸಹೋದರಿ ಜ್ಯೋತಿ 2015ರಲ್ಲಿ ತಮ್ಮ ಕಿಡ್ನಿ ಮಾರಾಟ ಮಾಡಿರುವ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಪ್ರಕರಣದಲ್ಲಿ ಆರೋಪಿ ಗಳಾಗಿದ್ದ ಗೋಪಾಲ್, ಜವರಯ್ಯ, ರಾಜು ಅವರೊಂದಿಗೆ ಪರಿಚಿತಳಾದ ತಾರಾ ಈ ಕೃತ್ಯಕ್ಕೆ ಕೈ ಹಾಕಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾಳೆ ಎಂದು ವಿವರಿಸಿದರು.

ಅಂಗಾಂಗ ಮಾರಾಟ ಶಿಕ್ಷಾರ್ಹ ಅಪ ರಾಧವಾಗಿದೆ. ಅಂಗಾಂಗ ಮಾರಾಟ ಜಾಲದ ಕುರಿತು ಮಾಧ್ಯಮ ಮತ್ತು ಸಾರ್ವಜನಿಕರು ಎಚ್ಚರದಿಂದ ಇರಬೇಕು. ಈ ತರಹದ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಮನುಷ್ಯನ ಅಂಗ ದಾನಕ್ಕೆ ನೀತಿ ನಿಯಮ ಗಳಿವೆ. ಹಣಕ್ಕಾಗಿ ಅಂಗಗಳನ್ನು ಮಾರಾಟ ಮಾಡುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಹಾಗಾಗಿ ಎಚ್ಚರ ಅಗತ್ಯ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಡಿವೈಎಸ್ಪಿ ಹೆಚ್.ಎಂ.ಶೈಲೇಂದ್ರ, ಸಬ್ ಇನ್ಸ್‍ಪೆಕ್ಟರ್ ಸಿ.ಎನ್.ರಮೇಶ್ ಹಾಜರಿದ್ದರು.

Translate »