ಮೈಸೂರು, ಫೆ.1-ಹೆಣ್ಣುಮಕ್ಕಳಿಗೆ ಪುರುಷರಷ್ಟೇ ಸಮಾನವಾದ ಅವಕಾಶಗಳು ಸಮಾಜದಲ್ಲಿ ಸಿಗಬೇಕು. ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡಿದ ಅಕ್ಕಮಹಾದೇವಿ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ತಿಳಿಸಿದರು.
ವಿಜಯನಗರ 3ನೇ ಹಂತದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶ್ರೀ ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಲೂ ಕೂಡ ಸಮಾಜದಲ್ಲಿ ಲಿಂಗತಾರತಮ್ಯ ನಡೆಯುತ್ತಿದ್ದು, ಇದರ ನಿವಾರಣೆಗೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಹೆಣ್ಣು ಮಕ್ಕಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗ ಬೇಕಾದರೆ ಮೈಸೂರಿನಂತಹ ನಗರದಲ್ಲಿ ಉತ್ತಮ ಸೌಲಭ್ಯವುಳ್ಳ ವಿದ್ಯಾರ್ಥಿನಿಲಯ ಗಳು ಬೇಕಾಗಿವೆ. ಇತ್ತೀಚೆಗೆ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಫಲಿತಾಂಶದಲ್ಲಿಯೂ ಮುಂದೆ ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಮಾರ್ಗದರ್ಶನ ಇರಬೇಕು. ಒಳ್ಳೆಯ ವಾತಾವರಣ, ಗುಣಮಟ್ಟದ ಶಿಕ್ಷಣ ಸಿಕ್ಕಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ. ಕೀಳರಿಮೆ ಬಿಟ್ಟು ಗುರಿ ಶ್ರದ್ಧೆ ಪ್ರಯತ್ನದಿಂದ ಮೇಲೆ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಮೈಸೂರು ನಗರ ಶಿಕ್ಷಣ ಕೇಂದ್ರವಾಗಿದ್ದು, ಎಲ್ಲರೂ ವಿದ್ಯಾವಂತರಾಗಿ ಉದ್ಯೋಗಕ್ಕೆ ಸೇರಿದ ಮೇಲೆ ಸಮಾಜಕ್ಕೆ ಸಾಧ್ಯವಾದಷ್ಟು ಸಹಾಯಮಾಡಿ, ಸಮಾಜ ನನಗೇನು ಮಾಡಿತು ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎನ್ನುವುದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಅವರು, ಎಂ. ರಾಮಯ್ಯನವರು ವಿಶೇಷ ಆಸಕ್ತಿ ವಹಿಸಿ ಹಾಸ್ಟೆಲ್ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಮಹಾ ಸ್ವಾಮೀಜಿ, ಶಾಸಕ ಡಾ|.ಯತೀಂದ್ರ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಎಂ.ರಾಮಯ್ಯ, ವಕೀಲರಾದ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಶಂಕರ್, ಕಾರ್ಯದರ್ಶಿ ಪುಟ್ಟಬಸವೇಗೌಡ, ನಿವೃತ್ತ ಕೆಎಎಸ್ ಹಿರಿಯ ಅಧಿಕಾರಿ ಚಿಕ್ಕಸ್ವಾಮಿ, ಅಧಿಕಾರಿಗಳಾದ ಶಿವಣ್ಣ, ಸತ್ಯನಾರಾಯಣ, ಜಿ.ಎಸ್.ಸೋಮಶೇಖರ್, ಬಸವರಾಜು, ಕುಮಾರಸ್ವಾಮಿ, ಮುಖಂಡರಾದ ಮಂಜುಳಾ ಮಾನಸ, ನಗರಪಾಲಿಕೆ ಸದಸ್ಯ ಗೋಪಿ, ಮಡೆಶಿವರಾಮ್, ಹರೀಶ್ ಹಾಜರಿದ್ದರು.