ಗಾಂಧಿ ಕೊಂದ ಗೋಡ್ಸೆ ದಿನಾಚರಣೆಯೇ?ದೇಶ ಎತ್ತ ಸಾಗುತ್ತಿದೆ: ರೈತಸಂಘದ  ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ
ಮೈಸೂರು

ಗಾಂಧಿ ಕೊಂದ ಗೋಡ್ಸೆ ದಿನಾಚರಣೆಯೇ?ದೇಶ ಎತ್ತ ಸಾಗುತ್ತಿದೆ: ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ

May 22, 2019

ಮೈಸೂರು: ಅಹಿಂಸಾತ್ಮಕವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರನ್ನು ವಿಶ್ವದ ಇತರೆಡೆ ಸ್ಮರಿಸು ತ್ತಿದ್ದರೆ, ಅವರನ್ನು ಅಮಾನವೀಯವಾಗಿ ಕೊಲೆ ಮಾಡಿದ ನಾಥುರಾಂ ಗೋಡ್ಸೆ ದಿನಾಚರಣೆಗೆ ಹಲವರು ಮುಂದಾಗಿರು ವುದನ್ನು ಗಮನಿಸಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಟ್ಟದಪುರ ಠಾಣೆಯಲ್ಲಿ ರೈತ ಸಂಘದ ಮುಖಂಡರೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿದ್ದಾರೆನ್ನುವ ಘಟನೆ ಕುರಿತಂತೆ ಮಾತನಾಡಿ, ರೈತ ಸಂಘ ಕೂಡಲೇ ನಡೆಸಿದ ಪ್ರತಿಭಟನೆ ಕಾರಣ ಅಲ್ಲಿನ ಅಧಿಕಾರಿಗೆ ಶಿಕ್ಷಾರ್ಹ ವರ್ಗಾವಣೆ ಮಾಡಿದ್ದರೂ, ಇಷ್ಟಕ್ಕೇ ರೈತ ಸಂಘ ಸುಮ್ಮನಾಗುವುದಿಲ್ಲ. ಬದಲಾಗಿ ಅವರನ್ನು ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದೆ. ಆ ರೀತಿ ಮಾಡದಿದ್ದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಬರಗಾಲ ಪರಿಸ್ಥಿತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ರೈತ ಸಂಘದ ಬೆಂಬಲವಿದೆ ಎಂದರು.

ರಾಜ್ಯವನ್ನು ಬರಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಕಳೆದ 17ರಿಂದ 19ರವರೆಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಪ್ರೊ.ರವಿವರ್ಮಕುಮಾರ್, ಯತಿರಾಜ್ ಇನ್ನಿತರ ಆಸಕ್ತರ ಸಮ್ಮುಖ ದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರದಲ್ಲಿ ತೆಗೆದುಕೊಂಡ ಐದು ಅಂಶಗಳ ಕಾರ್ಯಕ್ರಮಕ್ಕೂ ರೈತÀಸಂಘ ಬೆಂಬಲಿಸಲಿದೆ ಎಂದು ಹೇಳಿದರು. ಈ ಆಂದೋಲನದಲ್ಲಿ ವರ್ಷಕ್ಕೆ ಸಾವಿರದಂತೆ ಕಾರ್ಯಕರ್ತರನ್ನು ತರಬೇತುಗೊಳಿಸಿ ಬಳಸಿಕೊಳ್ಳಲಿದ್ದು, ಅವರು ಕೆರೆ-ಕುಂಟೆ ಒತ್ತುವರಿ ತೆರವು, ಸಂರಕ್ಷಣೆ, ಸರ್ಕಾರ ರೂಪಿಸಿ ಜಾರಿಗೆ ತರಲು ಉದ್ದೇಶಿಸಿರುವ ಜಲಾಮೃತ ಹಾಗೂ ಇತರೆ ಯೋಜನೆಗಳ ಜಾರಿಯಲ್ಲಿ ಗುತ್ತಿಗೆದಾರರು ಮತ್ತು ಮಧ್ಯಸ್ಥಿಕೆದಾರರನ್ನು ದೂರ ಇರಿಸಿ ಜನಸಮುದಾಯ ಕಾರ್ಯವನ್ನಾಗಿಸುವ ನಿಟ್ಟಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »