ಸರ್ಕಾರಿ ಶಾಲೆಗಳಿರುವುದು ಕೇವಲ ಬಡವರು, ದಲಿತರಿಗೆ ಎಂಬಂತಾಗಿದೆ
ಮೈಸೂರು

ಸರ್ಕಾರಿ ಶಾಲೆಗಳಿರುವುದು ಕೇವಲ ಬಡವರು, ದಲಿತರಿಗೆ ಎಂಬಂತಾಗಿದೆ

July 5, 2018
  • ಎನ್‍ಐಆರ್‍ಡಿಪಿಆರ್ ಮಹಾನಿರ್ದೇಶಕ ಡಾ.ಡಬ್ಲ್ಯು.ಆರ್.ರೆಡ್ಡಿ ವಿಷಾಧ

ಮೈಸೂರು:  ವರ್ಷ ಕಳೆದಂತೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರಿ ಶಾಲೆಗಳು ಕೇವಲ ಬಡವರು ಮತ್ತು ದಲಿತರಿಗೆ ಇರುವ ಶಾಲೆಗಳು ಎಂಬಂತಾಗಿದೆ. ಈ ಧೋರಣೆ ಬದಲಾಗಬೇಕು ಎಂದು ಹೈದರಾಬಾದ್‍ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(ಎನ್‍ಐಆರ್‍ಡಿಪಿಆರ್) ಮಹಾನಿರ್ದೇಶಕ ಡಾ.ಡಬ್ಲ್ಯು.ಆರ್.ರೆಡ್ಡಿ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ತಂತ್ರಜ್ಞಾನ ವಿಭಾಗದ ಎ.ವಿ.ಹಾಲ್‍ನಲ್ಲಿ ಆಯೋಜಿಸಿದ್ದ `ಗ್ರಾಮೀಣ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿರುವ ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಕುರಿತ ಸಮಾರೋಪದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪೋಷಕರು ಹೆಚ್ಚು ಹಣ ವ್ಯಯಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಕುಟುಂಬಗಳು ಬಡತನದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದರು.
ಹಲವು ವರ್ಷಗಳಿಂದ ವಿವಿಧ ಸರ್ಕಾರಗಳು ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸಂಪೂರ್ಣ ಯಶಸ್ವಿಯಾಗಿಲ್ಲ. ಗ್ರಾಮೀಣಾಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ದಾರಿಯಾಗಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಬುಡಕಟ್ಟು ಸಮುದಾಯದ ಜ್ಞಾನ ಹಾಗೂ ಸಂಸ್ಕøತಿಯನ್ನು ಅರಿಯಬೇಕು. ಆ ಮೂಲಕ ಅವರಿಗೆ ಶಿಕ್ಷಣವನ್ನು ನೀಡಬೇಕು. ಬದಲಾಗಿ ನಗರಪ್ರದೇಶದ ಶಿಕ್ಷಣವನ್ನು ಹೇರುವ ಮೂಲಕ ಶಿಕ್ಷಣವೆಂದರೆ ಹೊರೆ ಎನ್ನುವಂತೆ ಮಾಡಬಾರದು ಎಂದ ಅವರು, ಶಿಕ್ಷಕ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕರನ್ನು ನೇಮಿಸುವ ಮೂಲಕ ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಬೇಕು ಎಂದು ಹೇಳಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಮಾತನಾಡಿ, ಮೂರು ದಿನಗಳಿಂದ ನಡೆದ ಕಾರ್ಯಾಗಾರದಲ್ಲಿ ಗ್ರಾಮೀಣ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಇವುಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣದ ವಿಷಯದಲ್ಲಿ ನಗರ-ಗ್ರಾಮೀಣ ಪ್ರದೇಶಗಳೆಂಬ ಭಿನ್ನಾಭಿಪ್ರಾಯ ಮಾಡಬಾರದು, ಬುಡಕಟ್ಟು ಜನರ ಜ್ಞಾನ ಮತ್ತು ಸಂಸ್ಕೃತಿಯನ್ನು ಪರಿಗಣಿಸಿ ಅವುಗಳನ್ನು ಪಠ್ಯಗಳಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವುದು, ಬುಡಕಟ್ಟು ಪ್ರದೇಶದ ಜನರ ಸ್ಥಳೀಯ ಮತ್ತು ಪ್ರಾಯೋಗಿಕ ಜ್ಞಾನವನ್ನು ಗುರುತಿಸಿ ಅಗತ್ಯವಿದ್ದ ಕಡೆ ಅದನ್ನು ಬಳಸಿಕೊಳ್ಳುವುದು, ಶಿಕ್ಷಕರ ಬೋಧನಾ ಸಾಮರ್ಥ್ಯದ ಮೌಲ್ಯಮಾಪನ ಮಾಡುವುದು ಸೇರಿದಂತೆ ಮತ್ತಿತರೆ ಶಿಫಾರಸುಗಳನ್ನು ಸಲ್ಲಿಸಲಾಗುವುದು ಎಂದರು. ನವದೆಹಲಿಯ ಎನ್‍ಐಇಪಿಎಯ ಪ್ರೊ.ಅವಿನಾಶ್ ಕುಮಾರ್‍ಸಿಂಗ್, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಜಿ.ವಿ.ಗೋಪಾಲ್, ಪ್ರೊ.ಮಲ್ಲಿ ಗಾಂಧಿ ಉಪಸ್ಥಿತರಿದ್ದರು.

Translate »