ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್.ಡಿ.ದೇವೇಗೌಡ್ರೆ ಕಾರಣ
ಮೈಸೂರು

ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್.ಡಿ.ದೇವೇಗೌಡ್ರೆ ಕಾರಣ

October 15, 2019

ತುಮಕೂರು,ಅ.14- ನನ್ನ ಮೇಲೆ ಐಟಿ ದಾಳಿ ಏನಾದರೂ ಆದರೆ ಅದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇಕಾದ್ರೇ ದೇವೇಗೌಡರೇ ನನ್ನ ವಿರುದ್ಧ ಪತ್ರ ಬರೆದಿರ್ತಾರೆ. ನನ್ನ ಮೇಲೆ ಐಟಿ ದಾಳಿ ಮಾಡಿ ಅಂತ. ಅವರಿಗೆ ಏನೂ ಕೆಲಸ ಇರಲ್ವಲ್ಲಾ ಅದಕ್ಕೆ ಸುಮ್ಮನೆ ಕುತ್ಕೊಂಡು ಹೀಗೆ ಬರೆದಿರ್ತಾರೆ ಎಂದು ಹೇಳಿದ್ದಾರೆ. ನಾನೂ ಹಾಗೆಯೇ ದೇವೇಗೌಡರ ಆಸ್ತಿಯನ್ನು ತನಿಖೆ ಮಾಡೋಕೆ ಒತ್ತಾಯಿಸ್ತೀನಿ. ಅವರ ಕುಟುಂಬದ ಎಲ್ಲವನ್ನೂ ತನಿಖೆ ಮಾಡೋಕೆ ನಾನೂ ಪತ್ರ ಬರೀತೀನಿ ಎಂದು ಇದೇ ವೇಳೆ ಹೇಳಿದ್ದಾರೆ.

ಇನ್ನು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ರೈಡ್ ಮಾಡಬಹುದು. ಐಟಿ ರೈಡ್ ಆಗುತ್ತೆ ಅಂತಾ ಅಂದು ಕೊಂಡಿದ್ದೇನೆ. ಅದ್ಕೆಲ್ಲಾ ತಯಾರಿಯಲ್ಲಿದ್ದೇವೆ. ನಮ್ಗೂ ಎಲ್ಲಾ ಕಡೆ ಇಂಟೆಲಿಜನ್ಸ್ ಇದೆ. ಮಾಹಿತಿ ಬರುತ್ತೆ. ಮಾಡ್ಲಿ ನಮ್ದೇನ್ ತೊಂದ್ರೆ ಇಲ್ಲಾ ಎಂದು ಹೇಳಿದ್ದಾರೆ.

ಇನ್ನು ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಕೆ.ಎನ್.ರಾಜಣ್ಣ, ಪಾಪ ಆತ ತುಂಬಾ ಒಳ್ಳೆಯ ಹುಡ್ಗಾ. ಈ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಳಿ ಕೆಲಸ ಮಾಡ್ತಿದ್ದ. ಇದ್ದು ಎಲ್ಲವನ್ನೂ ಎದುರಿಸಬೇಕಿತ್ತು, ಅದನ್ನ ಬಿಟ್ಟು ಸಾಯೋ ಅಂತಾ ತೀರ್ಮಾನ ಮಾಡಿದ್ದು ತಪ್ಪು, ಅವನ ಸಾವಿಗೆ ನಾನು ವಿಷಾದ ವ್ಯಕ್ತಪಡಿಸ್ತೇನೆ ಎಂದು ಹೇಳಿದ್ದಾರೆ.

ಐಟಿ ಅಧಿಕಾರಿಗಳು ಸಾಯಿಸ್ಬೇಕು ಅಂತಾ ಬರಲ್ಲಾ, ಅವ್ರ ಕೆಲ್ಸ ಅವ್ರು ಮಾಡಿದ್ದಾರೆ. ಐಟಿಯಿಂದ ರಮೇಶ್ ಸತ್ತ ಅಂತಾ ನಾನೇನೂ ಹೇಳಲ್ಲಾ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಐಟಿ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾರು ತಪ್ಪು ಮಾಡ್ತಾರೋ ಅವ್ರ ಮೇಲೆ ಐಟಿ ರೈಡ್ ಮಾಡ್ತಾರೆ ಅಷ್ಟೇ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಚುನಾವಣೆಗೆ ಹಣ ರವಾನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾನೇನು ಹೇಳಲ್ಲ. ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಕೆಲ ನೀಟ್ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಇದೆ. ಆ ಹಿನ್ನೆಲೆಯಲ್ಲೂ ದಾಳಿ ಆಗಿರಬಹುದು ಎಂದು ತಿಳಿಸಿದ್ದಾರೆ. ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೂ ಇಡಿ ವಿಚಾರಣೆಗೂ ಸಂಬಂಧವೇ ಇಲ್ಲ. ಕೆಲವು ಮಾಹಿತಿಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ. ಅದನ್ನೆಲ್ಲಾ ತೆಗೆದುಕೊಂಡು ಹೋಗಿ ನಾಳೆ ಕೊಟ್ಟು ಬರುತ್ತೇನೆ. ಇನ್ನೊಂದು ಸಲ ನೋಟಿಸ್ ನೀಡಬೇಡಿ, ಯಾವಾಗ ಬೇಕೋ ಅವಾಗ ನಾನೇ ಬರ್ತೀನಿ ಅಂತಾ ಹೇಳಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್‍ಗೆ ಸಾಲ ಕೊಟ್ಟಿರುವ ಬಗ್ಗೆ ಕೇಳಿದರು. ಅದರ ಜೊತೆಗೆ ನನ್ನ ವರಮಾನ ಬಗ್ಗೆನೂ ಕೇಳಿದರು. ಅದನ್ನೂ ಹೇಳಿದ್ದೇನೆ ಎಂದರು.

Translate »