ನಾಳೆ ವಿಜಯದಶಮಿ ಮೆರವಣಿಗೆ
ಮೈಸೂರು

ನಾಳೆ ವಿಜಯದಶಮಿ ಮೆರವಣಿಗೆ

October 7, 2019

ಮೈಸೂರು, ಅ. 6(ಆರ್‍ಕೆ)- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅಕ್ಟೋಬರ್ 8ರಂದು ಮಂಗಳವಾರ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿ ಪ್ರಸಿದ್ಧ ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲಿದ್ದು, ಈ ಐತಿಹಾಸಿಕ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಅಕ್ಟೋಬರ್ 8ರಂದು ಮಧ್ಯಾಹ್ನ 2.15 ರಿಂದ 2.58 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಮನೆ ಬಲ ರಾಮ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದು, ಮಧ್ಯಾಹ್ನ 4.31ರಿಂದ 4.57ರವರೆಗೆ ಶುಭ ಕುಂಭ ಲಗ್ನದಲ್ಲಿ ಅರ್ಜು ನನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜೃಂಭಣೆಯ ವಿಜಯದಶಮಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಚಾಲನೆ ಮಾಡುವರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಅವರು ಈ ಸಂದರ್ಭ ಉಪಸ್ಥಿತರಿರುವರು.

ಎಡಬದಿ ವಿಜಯ, ಬಲಬದಿ ಕಾವೇರಿಯೊಂದಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂ ಡೇಶ್ವರಿಯ ಉತ್ಸವ ಮೂರ್ತಿಯನ್ನೊತ್ತು ಅರ್ಜುನ ಮೆರವಣಿಗೆಯಲ್ಲಿ ಸಾಗುವ ದೃಶ್ಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಭಾವಪರವಶವಾಗುವರು.

ಅಂದು ಸಂಜೆ 7 ಗಂಟೆಗೆ ಬನ್ನಿಮಂಟಪದಲ್ಲಿ ನಡೆಯ ಲಿರುವ ಪಂಜಿನ ಕವಾಯತು ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ರಾಜ್ಯಪಾಲ ವಜುಬಾಯಿ ಆರ್.ವಾಲಾ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ್ ಸಂಗಪ್ಪ ಸವದಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಸೇರಿದಂತೆ ಹಲವು ಗಣ್ಯರು ಆಕರ್ಷಕ ಪಂಜಿನ ಕವಾಯತು ವೀಕ್ಷಿಸುವರು. ಆ ಮೂಲಕ 2019ರ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ವಿಜಯ ದಶಮಿ ಮೆರವಣಿಗೆಗೆ ಮೈಸೂರು ಜಿಲ್ಲಾಡಳಿತವು ಅರಮನೆ ಆವರಣ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ಹಾಗೂ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಸಾರ್ವ ಜನಿಕರ ವೀಕ್ಷಣೆಗೆ ಸಕಲ ರೀತಿಯಲ್ಲಿ ಸಜ್ಜುಗೊಳಿಸಿದ್ದಾರೆ.

ಜಂಬೂ ಸವಾರಿಯನ್ನು ನೋಡಲು ಸಹಸ್ರಾರು ಮಂದಿ ಸೇರುವುದರಿಂದ ಮೈಸೂರಿನ ಸುಮಾರು 4 ಸಾವಿರ ಸೇರಿ ರಾಜ್ಯ ಇತರ ಜಿಲ್ಲೆಗಳಿಂದ 6 ಸಾವಿರ ಪೊಲೀಸ್ ಅಧಿ ಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದ್ದು, ಇನ್ನಿಲ್ಲದ ಭದ್ರತೆ ಮಾಡಿಕೊಂಡು ಕಟ್ಟೆಚ್ಚರ ವಹಿಸಲಾ ಗಿದೆ. ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆ, ಆಸ್ಪತ್ರೆ ಗಳಲ್ಲಿ ವಾರ್ಡ್‍ಗಳು, ವೈದ್ಯರು ಹಾಗೂ ಸಿಬ್ಬಂದಿಗಳು ನಿಯೋಜನೆ, ಆಂಬುಲನ್ಸ್, ಅಗ್ನಿಶಾಮಕ ವಾಹನಗಳನ್ನು ಮೆರವಣಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಡಿನ ಕಲೆ, ಸಂಸ್ಕøತಿ, ಪರಂಪರೆ ಸಾರುವ ಸ್ತಬ್ಧಚಿತ್ರಗಳು, 40ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ಪೊಲೀಸ್ ವಾದ್ಯ ತಂಡ, ಆನೆಗಾಡಿ ಸೇರಿದಂತೆ ಹತ್ತು ಹಲವು ತಂಡಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ.

ರಾಜಮಾರ್ಗದ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡಗಳನ್ನೇರದಂತೆ ಸೂಚನೆ ನೀಡಲಾಗಿದ್ದು, ಅಹಿತಕರ ಘಟನೆ ನಡೆಯ ದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Translate »