ಸುಂಟಿಕೊಪ್ಪ ಬಳಿ ಕಾರಿಗೆ ಲಾರಿ ಡಿಕ್ಕಿ: ಓರ್ವ ಸಾವು
ಕೊಡಗು

ಸುಂಟಿಕೊಪ್ಪ ಬಳಿ ಕಾರಿಗೆ ಲಾರಿ ಡಿಕ್ಕಿ: ಓರ್ವ ಸಾವು

March 31, 2019

ಮಡಿಕೇರಿ: ಕಾಂಕ್ರೆಟ್ ಮಿಕ್ಸರ್ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆಯಲ್ಲಿ ಸಂಭವಿಸಿದೆ.

ಕೊಡಗರಹಳ್ಳಿಯ ಸ್ಕೂಲ್ ಬಾಣೆ ನಿವಾಸಿಯಾದ ಉಮ್ಮರ್ ಎಂಬು ವರ ಪುತ್ರ ಇರ್ಫಾನ್(21) ಮೃತಪಟ್ಟಿದ್ದು, ಕಾರಿನಲ್ಲಿದ್ದ ಮತ್ತೋರ್ವ ಯುವಕ ಸಮದ್ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಶಾಲನಗರ ಸಮೀಪದ ಕೊಪ್ಪದ ಭಾರತಮಾತಾ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಇರ್ಫಾನ್ ತನ್ನ ಸ್ನೇಹಿತ ಸಮದ್‍ನೊಂದಿಗೆ ಕುಶಾಲನಗರದಿಂದ ತಮ್ಮ ಫಿಯೆಟ್ ಕಾರಿನಲ್ಲಿ ಸುಂಟಿಕೊಪ್ಪಕ್ಕೆ ತೆರಳುತ್ತಿದ್ದ. ಈ ಸಂದರ್ಭ ಏಳನೇ ಹೊಸಕೋಟೆ ಬಳಿ ಎದುರಿನಿಂದ ಬಂದ ಕಾಂಕ್ರಿಟ್ ಮಿಕ್ಸರ್ ಲಾರಿ ಮುಖಾಮುಖಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇರ್ಫಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »