ಮಕ್ಕಳಗುಡಿ ಬೆಟ್ಟದಲ್ಲಿ ಪ್ರವಾಸಿಗನ ಕೊಲೆ ಯತ್ನ: ಆರೋಪಿ ಬಂಧನ
ಕೊಡಗು

ಮಕ್ಕಳಗುಡಿ ಬೆಟ್ಟದಲ್ಲಿ ಪ್ರವಾಸಿಗನ ಕೊಲೆ ಯತ್ನ: ಆರೋಪಿ ಬಂಧನ

January 9, 2019

ಸೋಮವಾರಪೇಟೆ: ಪ್ರವಾಸಿತಾಣ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಹಲ್ಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ರಾಯಪುರ ನಿವಾಸಿ ಕೆಲವು ವರ್ಷ ಗಳಿಂದ ಮೈಸೂರಿನ ಎಸ್‍ಬಿಐ ಯೂನಿಟ್‍ನ ಗ್ರಾಮೀಣ ಪ್ರತಿನಿಧಿಯಾಗಿರುವ ರಾಕೇಶ್ ಗೌಡ(26), ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.

ಮುಖ, ತಲೆ, ಕೈ, ಭಾಗಕ್ಕೆ ಮಾರಣಾಂತಿಕ ಹಲ್ಲೆಯಾಗಿದೆ. ಹಲ್ಲೆ ನಡೆಸಿದ ತಾಲೂಕಿನ ಕಿರಂಗದೂರು ಗ್ರಾಮದ ಕುಮಾರಸ್ವಾಮಿ ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಬೆಟ್ಟದ ಸಮೀಪದಲ್ಲೇ ತಿರುಗಾಡುತ್ತಿದ್ದ ಕುಮಾರಸ್ವಾಮಿಯ ಬಟ್ಟೆಯಲ್ಲಿ ರಕ್ತವನ್ನು ಗಮನಿಸಿದ ಗ್ರಾಮ ಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ಸಿ.ಸಿ. ಕ್ಯಾಮೆರಾ ದಲ್ಲಿ ಸೆರೆಯಾದ ದೃಶ್ಯಾವಳಿಯ ವಿವರವನ್ನು ಪೊಲೀಸರು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ ಕೆ.ಎ. 01-ಇವಿ 8766 ನಂಬರಿನ ಯಮಹ ಬೈಕ್‍ನಲ್ಲಿ ಬೆಟ್ಟಕ್ಕೆ ಆಗಮಿಸಿದ ರಾಕೇಶ್‍ನ ಮೇಲೆ ಯುವಕನೋರ್ವ ಹಲ್ಲೆ ನಡೆಸುತ್ತಿರುವುದನ್ನು ಸ್ಥಳೀಯ ವಾಟರ್‍ಮನ್ ಬಾಬು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಬಾಬು ಹಾಗೂ ಕುಂಬೂರಿನ ಆಟೋ ಚಾಲಕ ವಿಜಯ್ ಗಾಯಾಳುವನ್ನು ಮುಖ್ಯ ರಸ್ತೆಗೆ ಸಾಗಿಸಿ, ಆಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

Translate »