ಮೀಡಿಯಾದವರು ಹಾಳಾಗಿದ್ದೀರಿ, ಎಲ್ಲದರಲ್ಲೂ ತಪ್ಪು ಹುಡುಕುವುದನ್ನ ಬಿಡಿ
ಮೈಸೂರು

ಮೀಡಿಯಾದವರು ಹಾಳಾಗಿದ್ದೀರಿ, ಎಲ್ಲದರಲ್ಲೂ ತಪ್ಪು ಹುಡುಕುವುದನ್ನ ಬಿಡಿ

June 7, 2019

ರಾಮನಗರ: ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಮುನಿಸಿಕೊಂಡಿದ್ದು ಈಗ ಅವರ ಪತ್ನಿ ಕೂಡ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಎಲ್ಲದರಲ್ಲೂ ತಪ್ಪು ಹುಡುಕುವುದನ್ನು ಬಿಡಿ ಎಂದು ಮಾಧ್ಯಮಗಳ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕ್ಷೇತ್ರಕ್ಕೆ ಆಗಮಿಸಿದ ವೇಳೆ, ಮಾಧ್ಯಮದವರ ಬಳಿ ಮಾತನಾಡಲು ಏನಿದೆ, ನಮ್ಮ ಕೆಲಸ ಮಾಡಲು ಬಂದಿದ್ದೇವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಮೀಡಿಯಾ ದವರು ಹಾಳಾಗಿದ್ದೀರಿ. ಇದೇ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರಿಗೆ ನಿಮ್ಮ ಬಗ್ಗೆ ಬಹಳ ಬೇಸರವಿದೆ. ಇಲ್ಲದೇ ಇರುವ ತಲೆಹರಟೆ ಪ್ರಶ್ನೆ ಕೇಳುತ್ತೀರಿ. ಮಾಧ್ಯಮದವರ ಬಳಿ ಮಾತ ನಾಡುವ ಅವಶ್ಯಕತೆ ಏನಿದೆ ನಮಗೆ ಎಂದು ಕಿಡಿಕಾರಿದ್ದಾರೆ.

ಇವತ್ತಿನ ವಿಶೇಷ ಏನಿಲ್ಲ. ರೆಗ್ಯೂಲರ್ ಆಗಿ ಬರುತ್ತೇನೆ. ಇದರಲ್ಲಿ ಹೊಸದೇನು ಇಲ್ಲ. ಚುನಾವಣೆ ನೀತಿ ಸಂಹಿತೆ ಇದ್ದ ಕಾರಣಕ್ಕೆ ಕೆಲ ದಿನಗಳು ಬರಲು ಸಾಧ್ಯವಾಗಿರಲಿಲ್ಲ ಅಷ್ಟೇ ಎಂದರು. ಈ ವೇಳೆ ಕೆಲ ಗ್ರಾಮಗಳಿಗೆ ನೀರಿನ ಸಮಸ್ಯೆ ಇದೆ ಎಂದು ವರದಿಗಾರರು ಪ್ರಶ್ನೆ ಕೇಳಿದ್ದಕ್ಕೆ, ಹೊರಗಡೆ ಕುಳಿತು ನಿಮಗೆ ಟೀಕೆ ಮಾಡುವುದು ಸುಲಭ. ಗ್ರೌಂಡ್‍ಗೆ ಇಳಿದು ನಾವು ಕೆಲಸ ಮಾಡುತ್ತೇವೆ. ಅದರ ಕಷ್ಟ ನಮಗೆ ಗೊತ್ತಿರುತ್ತದೆ. ನಿಮಗೂ ಈ ಬಗ್ಗೆ ಅನುಭವ ಆಗಬೇಕು. ಮಾಧ್ಯಮದ ಯಾರನ್ನಾದರು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿ, ಗೆದ್ದು, ಕೆಲಸ ಮಾಡಿ ತೋರಿಸಿ. ಆಗ ನಿಮಗೆ ನಮ್ಮ ಕಷ್ಟ ಏನು ಎನ್ನುವುದು ತಿಳಿಯುತ್ತೆ ಎಂದು ಸವಾಲು ಹಾಕಿದರು. ರಾಮನಗರ ನನ್ನ ಕ್ಷೇತ್ರ ಆಗುವ ಮೊದಲು ಕುಮಾರಸ್ವಾಮಿ ಅವರ ಕ್ಷೇತ್ರವಾಗಿತ್ತು. ನಾವು ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳಲ್ಲಿ ಕೆಲವನ್ನು ಮಾಡಲು ಆಗಿರದೇ ಇರಬಹುದು, ಆದರೆ ಬಹುತೇಕ ಭರವಸೆಗಳನ್ನು ಪೂರ್ತಿಗೊಳಿಸಿದ್ದೇವೆ. ಕೆಲವು ಬಾರಿ ಭರವಸೆಗಳನ್ನು ಈಡೇರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಟೈಮ್ ಬೇಕಾಗುತ್ತೆ. ಮುಂದಿನ ದಿನಗಳಲ್ಲಿ ನೋಡಿ ಕೆಲಸ ಮಾಡುತ್ತೇವೆ. ಎಲ್ಲದರಲ್ಲೂ ತಪ್ಪು ಹುಡುಕುವ ಕೆಲಸ ಮಾಡಬೇಡಿ ಎಂದು ಹೇಳಿದರು. ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿ, ಮಹಿಳೆಯರಾಗಿ ನಾವು ಗ್ರಾಮ ವಾಸ್ತವ್ಯ ಮಾಡಲು ಕಷ್ಟವಾಗುತ್ತದೆ. ಈ ವಿಚಾರದ ಬಗ್ಗೆ ಯೋಚನೆ ಮಾಡುತ್ತೇನೆ. ಸಿಎಂ ಅವರ ಕಾಲಾವಕಾಶ ಪಡೆದು ಗ್ರಾಮವಾಸ್ತವ್ಯ ನಿಗದಿ ಮಾಡುತ್ತೇವೆ. ರಾಮನಗರ ಕ್ಷೇತ್ರದಲ್ಲೂ ಅವರು ಗ್ರಾಮವಾಸ್ತವ್ಯ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.

Translate »