ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ
ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ

October 15, 2018

ಪಿರಿಯಾಪಟ್ಟಣ: ತಾಲೂಕಿನ ಕಾವೇರಿ ನದಿ ದಂಡೆಯ ಹನುಮಂತಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ವತಿಯಿಂದ ಗ್ರಾಮಕ್ಕೆ ಮಂಜೂರಾದ 60 ಲಕ್ಷ ರೂ.ಗಳ ಅನುದಾನದಡಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ಒತ್ತು ನೀಡಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗುವುದು. ಆಂಜನೇಯ ದೇವಾಲಯದ ಎದರು ಹೈಟೆಕ್ ದೀಪದ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಹೊನ್ನಾಪುರ ಗ್ರಾಮದಲ್ಲಿ ಜನರ ಕುಂದು-ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕೆರೆಗೆ ಸೋಪಾನ ಕಟ್ಟೆ, ರಸ್ತೆ ಹಾಗೂ ಸ್ಮಶಾನದ ಅಭಿವೃದ್ಧಿಗೆ 1.30 ಲಕ್ಷ ರೂ. ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹೊನ್ನಾಪುರ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿರುವುದನ್ನು ತೆರವು ಗೊಳಿಸಿ ಗ್ರಾಮದಲ್ಲಿ ಮನೆ ಇಲ್ಲದ ಬಡವರಿಗೆ ಸರ್ಕಾರ ದಿಂದ ಖಾಲಿ ನಿವೇಶನದ ಹಕ್ಕು ಪತ್ರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ರುದ್ರಮ್ಮ ನಾಗಯ್ಯ, ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಬಿ.ಹೆಚ್.ರಮೇಶ್, ಕಿರಿಯ ಅಭಿಯಂತರ ಸತ್ಯ, ಲೋಕೋಪ ಯೋಗಿ ಸಹಾಯಕ ಅಭಿಯಂತರ ನಾಗರಾಜ್, ಗ್ರಾಪಂ ಸದಸ್ಯ ರಾದ ವಿನೋದ್‍ಕುಮಾರ್, ಜಗದೀಶ್, ಪಿಡಿಓ ದುಡ್ಡಮಾದಯ್ಯ, ಎಎಸ್‍ಐ ಜಗದೀಶ್, ಅರಣ್ಯ ನಿವೃತ್ತ ಅಧಿಕಾರಿ ಆಂಜನೇಯ, ಗುತ್ತಿಗೆದಾರ ರಂಗಸ್ವಾಮಿ, ಮುಖಂಡ ಮಹಾದೇವ್ ಹಾಜರಿದ್ದರು.

Translate »