ಮೋದಿಯೇ ಮತ್ತೆ ಪ್ರಧಾನಿಯಾಗಲಿ ಪ್ರತಿಪಕ್ಷದ ಹಿರಿಯ ಸದಸ್ಯ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಆಶಯ
ಮೈಸೂರು

ಮೋದಿಯೇ ಮತ್ತೆ ಪ್ರಧಾನಿಯಾಗಲಿ ಪ್ರತಿಪಕ್ಷದ ಹಿರಿಯ ಸದಸ್ಯ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಆಶಯ

February 14, 2019

ಮಹಾಘಟಬಂಧನ್‍ಗೆ ಭಾರೀ ಆಘಾತ

ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧ ವಾರ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖ ನಾಯಕರು ಸೇರಿ ದಂತೆ ಎಲ್ಲಾ ನಾಯಕರೂ ದಿಗ್ಭ್ರಮೆಗೆ ಒಳಗಾಗುವಂತಹ ಪ್ರಸಂಗ ನಡೆಯಿತು.

ಪ್ರತಿಪಕ್ಷಗಳ ಮಹಾಘಟಬಂಧನದ ಭಾಗವಾಗಿರುವ, ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಂಸದ ಮುಲಾಯಂಸಿಂಗ್ ಯಾದವ್ ಆಡಿದ ಮಾತುಗಳೇ ಈ ದಿಗ್ಭ್ರಮೆಗೆ ಕಾರಣವಾದವು.

`ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ’ ಎಂಬ ಹಾರೈಕೆಯ ಮಾತುಗಳನ್ನು ಮುಲಾಯಂ ಆಡಿದ್ದು ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ, ಆಘಾತ, ಅನಿರೀಕ್ಷಿತ ತಿರುವುಗಳಿಗೆ ಕಾರಣ ವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯೊಡ್ಡಲು ಎಸ್‍ಪಿ ಮುಖ್ಯಸ್ಥ ಅಖಿ ಲೇಶ್ ಯಾದವ್, ಬಿಎಸ್‍ಪಿ ನಾಯಕಿ ಮಾಯಾವತಿ ಜತೆಗೂಡಿ ಮಹಾಘಟ ಬಂಧನ್ ರಚಿಸಿದ್ದರೆ, ಇತ್ತ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಮಾತ್ರ ಮುಂದಿನ ಅವಧಿಗೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿ ಯಾಗಲಿ. ಆ ಸಾಮಥ್ರ್ಯ ಇರುವುದು ಅವರೊಬ್ಬರಿಗೆ ಮಾತ್ರ ಎಂದು ಸಂಸತ್ ನಲ್ಲಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಮೀಪದಲ್ಲೇ ಇರುವಾಗ ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷರೂ ಆದ ಮುಲಾಯಂಸಿಂಗ್ ಯಾದವ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧಿ ಪಕ್ಷದಲ್ಲಿದ್ದು ಪ್ರಧಾನಿ ಅವರನ್ನು ಹೊಗಳಿರುವುದು ಮಹಾ ಘಟಬಂಧನ್‍ಗೆ ನುಂಗಲಾರದ ತುತ್ತಾಗಿದೆ. ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂಸಿಂಗ್ ಯಾದವ್ ಅವರು 2019ರಲ್ಲೂ ಮೋದಿ ಅವರೇ ಪ್ರಧಾನಿ ಯಾಗಿ ಆರಿಸಿ ಬರಲಿ. ಅಷ್ಟೇ ಅಲ್ಲ, ಈ ಸದನದಲ್ಲಿರುವ ಎಲ್ಲರೂ ಮತ್ತೊಮ್ಮೆ ಆರಿಸಿ ಬರಲಿ ಎಂದು ಹಾರೈಸಿದರು.

ಪ್ರಧಾನಿಯಾಗಿ ಎಲ್ಲರನ್ನು ಸಂತೋಷ ಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ಪ್ರಯತ್ನದಲ್ಲಿ ಮೋದಿ ಶ್ರಮಿಸಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕಳಂಕ ರಹಿತ ಆಡಳಿತ ನೀಡಿದ್ದಾರೆ ಎಂದೆಲ್ಲಾ ಹಿರಿಯ ಸಂಸದ ಮುಲಾಯಂ ಸಿಂಗ್ ಪ್ರಧಾನಿಯನ್ನು ಹಾಡಿ ಹೊಗಳಿದರು. ಈ ವೇಳೆ ಮುಲಾಯಂ ಸಿಂಗ್ ಪಕ್ಕದಲ್ಲೇ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕುಳಿತ್ತಿದ್ದರು. ಮುಲಾಯಂ ಹೇಳಿಕೆ ಅವರನ್ನು ತುಸು ವಿಚಲಿತರಾಗುವಂತೆ ಮಾಡಿತು.

Translate »