ನಂಜನಗೂಡು: ಪಟ್ಟಣದ ಲಾಡ್ಜ್ ವೊಂದರಲ್ಲಿ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಕೆ.ಆರ್ ಮೊಹಲ್ಲಾದ ಹಳೇ ಬಂಡಿಕೇರಿ ನಿವಾಸಿ, ಕೇಬಲ್ ಆಪರೇಟರ್ ಜಿ.ಆರ್. ಬಾಬು(45) ಆತ್ಮಹತ್ಯೆಗೆ ಶರಣಾದವರು. ಪಟ್ಟಣದ ಖಾಸಗಿಬಸ್ ನಿಲ್ದಾಣದ ಸಮೀಪವಿರುವ ಬೃಂದಾವನ್ ಲಾಡ್ಜ್ ನ ಕೊಠಡಿಯಲ್ಲಿ ನಿನ್ನೆ ತಂಗಿದ್ದರು.
ಇಂದು ಬೆಳಿಗ್ಗೆ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು, ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪಿಎಸ್ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೊಠಡಿ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಬಾಬು ಅವರ ಪತ್ನಿ ಶಿಲ್ಪಾ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ನಂಜನಗೂಡು ಪಟ್ಟಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.