ಮೈಸೂರಿನ ಸಿಐಎಸ್‍ಎಫ್ ಮುಖ್ಯ ಪೇದೆ ಹೃದಯಾಘಾತದಿಂದ ಸಾವು
ಮೈಸೂರು

ಮೈಸೂರಿನ ಸಿಐಎಸ್‍ಎಫ್ ಮುಖ್ಯ ಪೇದೆ ಹೃದಯಾಘಾತದಿಂದ ಸಾವು

May 5, 2019

ಮೈಸೂರು: ಲೋಕಸಭಾ ಚುನಾವಣಾ ಭದ್ರತಾ ಕರ್ತವ್ಯಕ್ಕೆ ಉತ್ತರ ಪ್ರದೇಶಕ್ಕೆ ನಿಯೋಜಿತರಾಗಿದ್ದ ಮೈಸೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮುಖ್ಯಪೇದೆ ಆರ್.ಕೆ. ಪ್ರಕಾಶ್(48) ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೈಸೂರಿನ ಆರ್‍ಬಿಐನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಹುಂಚಹಾರ್ ಎಂಬ ಸ್ಥಳದಲ್ಲಿ ಚುನಾವಣಾ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇಂದು ಮುಂಜಾನೆ ತೀವ್ರ ಹೃದಯಾಘಾತ ಕ್ಕೊಳಗಾಗಿ ಪ್ರಕಾಶ್ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಇಂದು ಮಧ್ಯ ರಾತ್ರಿ ವೇಳೆಗೆ ಪಾರ್ಥಿವ ಶರೀರ ಮೈಸೂರಿನ ಆರ್‍ಬಿಐ ತಲುಪಲಿದೆ ಎಂದು ಹೇಳಲಾಗಿದೆ. ಪ್ರಕಾಶ್ ಅವರು ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಮಂಜುನಾಥ ಬಡಾವಣೆ ನಿವಾಸಿಯಾಗಿದ್ದು, ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Translate »