ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!
ಮೈಸೂರು

ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!

November 23, 2018

ಮೈಸೂರು: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಬಯಲಿಗೆಳೆದಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಮಹಿಳೆ ಸೇರಿ ಇಬ್ಬರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂಜನಗೂಡಿನ ನಿವಾಸಿಗಳಾದ ಸಿದ್ದರಾಜು ಅಲಿಯಾಸ್ ಸ್ವಾಮಿ ಮತ್ತು ರಾಜಮ್ಮ, ಅಪ್ರಾಪ್ತ ಬಾಲಕಿ ಕೊಂದು ತಲೆಮರೆಸಿ ಕೊಂಡಿದ್ದವರು. ಹತ್ಯೆ ಪ್ರಕರಣ ಪತ್ತೆ ಕಾರ್ಯಾಚರಣೆ ಕುರಿತಂತೆ ಮೈಸೂರು ಜಿಲ್ಲಾ ಎಸ್ಪಿ ಅಮಿತ್‍ಸಿಂಗ್ ಇಂದು ಮೈಸೂ ರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳಾದ ಸಿದ್ದರಾಜು ಮತ್ತು ರಾಜಮ್ಮ, ಬಾಲಕಿಯ ರಕ್ತ ಸಂಬಂಧಿಗಳು. ಇಬ್ಬರ ನಡುವೆ ಅಕ್ರಮ ಸಂಬಂಧವಿದ್ದು, ನವೆಂಬರ್ 16ರಂದು ಬೆಳಿಗ್ಗೆ ಮನೆ ಹಿಂದಿನ ಹಿತ್ತಲಲ್ಲಿ ಬಾಲಕಿ ಬಹಿರ್ದೆಸೆಗೆಂದು ಹೋಗಿದ್ದಾಗ ಸಿದ್ದರಾಜು ಮತ್ತು ರಾಜಮ್ಮರ ರಾಸಲೀಲೆ ನೋಡಿದ್ದಳು.

ಆಕೆ ಇದನ್ನು ಯಾರಿಗಾದರೂ ಹೇಳಬಹುದೆಂದು ಹೆದರಿ, ಸಿದ್ದರಾಜು ಮತ್ತು ರಾಜಮ್ಮ ಅದೇ ದಿನ ಬೆಳಿಗ್ಗೆ 10 ಗಂಟೆ ವೇಳೆಗೆ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆ ಮನೆಗೆ ಹೋಗಿ, ಟವಲ್ನಿಂದ ಕುತ್ತಿಗೆ, ಬಾಯಿ ಅದುಮಿ ಹತ್ಯೆಗೈದಿದ್ದರು. ಈ ವೇಳೆ ಬಾಲಕಿಯ ತಂಗಿ, ತಮ್ಮ ಶಾಲೆಗೆ ಹೋಗಿದ್ದರು. ತಂದೆ-ತಾಯಿ ಕೆಲಸಕ್ಕೆ ಹೋಗಿದ್ದರಿಂದ ಒಬ್ಬಳೇ ಇದ್ದ ಬಾಲಕಿ ಯನ್ನು ಕೊಂದು ಬಾಗಿಲು ಹಾಕಿಕೊಂಡು ಬಂದಿದ್ದರು. ಮಧ್ಯಾಹ್ನದ ವೇಳೆಗೆ ಮಕ್ಕಳು ಶಾಲೆಯಿಂದ ಬಂದಾಗಲೇ ಬಾಲಕಿ ಕೊಲೆಯಾಗಿರುವುದು ತಿಳಿಯಿತು.

ವಿಷಯ ತಿಳಿಯುತ್ತಿದ್ದಂತೆಯೇ ತಂದೆ- ತಾಯಿ, ಸಂಬಂಧಿಕರು, ಪೊಲೀಸರಿಗೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ಯಾರೋ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ಸುದ್ದಿ ಹರಡಿತ್ತು. ತಂದೆ ನೀಡಿದ ಲಿಖಿತ ದೂರಿನನ್ವಯ ಗಂಭೀರ ಸ್ವರೂಪದ ಪ್ರಕ ರಣವೆಂದು ಪರಿಗಣಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 376, 302, ರೆಡ್‍ವಿತ್ 5 ಮತ್ತು 6 ಪೋಕ್ಸೊ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳ ಪತ್ತೆಗಾಗಿ ಎಸ್ಪಿ ಅಮಿತ್ ಸಿಂಗ್ ಅವರು ಅಡಿಷನಲ್ ಎಸ್ಪಿ ಪಿ.ವಿ. ಸ್ನೇಹಾ ನೇತೃತ್ವದಲ್ಲಿ ಡಿವೈಎಸ್‍ಪಿ ಸಿ. ಮಲ್ಲಿಕ್, ಸರ್ಕಲ್ ಇನ್‍ಸ್ಪೆಕ್ಟರ್ ಎಂಎಲ್. ಶೇಖರ್, ಸಬ್ ಇನ್‍ಸ್ಪೆಕ್ಟರ್‍ಗಳಾದ ಪುನೀತ್ ಮತ್ತು ಆನಂದ್ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಘಟನಾ ಸ್ಥಳದಲ್ಲೆ ದೊರೆತ ಸಾಂದರ್ಭಿಕ ಸಾಕ್ಷ್ಯ, ಮೊಬೈಲ್ ಟವರ್ ಲೊಕೇಷನ್ ಸುಳಿವಿನ ಮೇಲೆ ಬೆನ್ನತ್ತಿದಾಗ ಮಂಗಳವಾರ ಸಿದ್ದರಾಜು ಸೆರೆ ಸಿಕ್ಕರೆ, ರಾಜಮ್ಮ ನನ್ನು ಇಂದು ಬೆಳಿಗ್ಗೆ ಬಂಧಿಸಲಾಯಿತು.

ಆರೋಪಿಗಳನ್ನು ವಿಚಾರಣೆಗೊಳ ಪಡಿಸಿದಾಗ ತಮ್ಮಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ನವೆಂಬರ್ 16ರಂದು ಬೆಳಿಗ್ಗೆ ತಾವು ರಾಸಲೀಲೆಯಲ್ಲಿ ತೊಡಗಿದ್ದಾಗ ಬಾಲಕಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡೆವು. ಅದನ್ನು ಸಂಬಂಧಿಕಳೇ ಆಗಿರುವ ಆಕೆ ಬೇರೆಯವರಿಗೆ ಹೇಳುತ್ತಾಳೆಂದು ಹೆದರಿ, ಕೊಲೆ ಮಾಡಿದೆವು ಎಂದು ಸಿದ್ದರಾಜು ಮತ್ತು ರಾಜಮ್ಮ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಬಾಲಕಿ ಮನೆ ಸಮೀಪವೇ ಸಿದ್ದರಾಜು ಮನೆಯೂ ಇದೆಯಾದರೂ, ಆತನ ಪತ್ನಿ ಮೈಸೂರಿನ ದಟ್ಟಗಳ್ಳಿಯಲ್ಲಿನ ತವರಿನಲ್ಲಿದ್ದ ಕಾರಣ, ಆತನೂ ಅಲ್ಲಿಯೇ ಇದ್ದು, ಪ್ರತಿದಿನ ನಂಜನಗೂಡಿಗೆ ಬಂದು ಹೋಗುತ್ತಿದ್ದ. ರಾಜಮ್ಮ ಮನೆಯೂ ಸಹ ಬಾಲಕಿ ಮನೆ ಹಿಂಬದಿ ಹಿತ್ತಲ ಪಕ್ಕದಲ್ಲೇ ಇದ್ದು, ಗಂಡ ಕೂಲಿ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಗ ಸಿದ್ದರಾಜು ಆಕೆ ಮನೆಗೆ ಬರುತ್ತಿದ್ದ ಎಂಬುದನ್ನೂ ಆಕೆ ವಿಚಾರಣೆ ವೇಳೆ ಹೇಳಿದ್ದಾಳೆ. ಟವಲ್‍ನಿಂದ ಕುತ್ತಿಗೆ ಬಿಗಿದು, ಬಾಯಿಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದೆವೆಯೇ ಹೊರತು, ಆಕೆಯ ಮೇಲೆ ಅತ್ಯಾಚಾರವೆಸಗಿಲ್ಲ ಎಂದು ಆರೋಪಿ ಹೇಳಿದ್ದಾನೆ. ಸಾಂದರ್ಭಿಕ ಸಾಕ್ಷ್ಯಗಳೂ ಅತ್ಯಾಚಾರ ನಡೆದಿರುವ ಬಗ್ಗೆ ಸುಳಿವು ನೀಡಿಲ್ಲ ಎಂದು ತಿಳಿಸಿದ ಎಸ್ಪಿ ಅಮಿತ್ ಸಿಂಗ್, ವೈದ್ಯಕೀಯ ಪರೀಕ್ಷಾ ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗಳು ಬರು ವವರೆಗೆ ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದರು. ಆರೋಪಿಗಳಿಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ 1 ವಾರ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದೂ ಅಮಿತ್ ಸಿಂಗ್ ತಿಳಿಸಿದರು.

ಇದರೊಂದಿಗೆ ಅತ್ಯಾಚಾರವೆಸಗಿ ಹತ್ಯೆಗೈಯ್ಯಲಾಗಿದೆ ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈಗ ಎಲ್ಲಾ ವದಂತಿಗೆ ತೆರೆಬಿದ್ದಂತಾಗಿದೆ. ಈ ಪತ್ತೆ ಕಾರ್ಯದಲ್ಲಿ ನಂಜನಗೂಡು ಉಪವಿಭಾಗದ ಡಿವೈಎಸ್‍ಪಿ ಸಿ.ಮಲ್ಲಿಕ್, ಸರ್ಕಲ್ ಇನ್‍ಸ್ಪೆಕ್ಟರ್ ಎಂ.ಎಲ್.ಶೇಖರ್, ಸಬ್‍ಇನ್‍ಸ್ಪೆಕ್ಟರ್‍ಗಳಾದ ಪುನೀತ್, ಆನಂದ್, ಸಿಬ್ಬಂದಿಗಳಾದ ಅನಂತ್‍ನಾಗ್, ಮಹೇಶ್, ಸುರೇಶ್, ಪ್ರಸನ್ನಕುಮಾರ್, ದೇವರಾಜು, ಹರೀಶ್, ಸಿದ್ದಪ್ಪಾಜಿ, ಶ್ರೀಕಾಂತ್, ಕೃಷ್ಣ, ಎನ್.ಎಂ.ಚಂದ್ರ, ಸುಮಂಗಲಿ ಅವರು ಗಳು ಪಾಲ್ಗೊಂಡಿದ್ದರು.

ಸಂಬಂಧಿಗಳ `ಆ’ ಸಂಬಂಧ…

ನಂಜನಗೂಡು:  ಅಪ್ರಾಪ್ತ ಬಾಲಕಿ ಹಂತಕರಾದ ಸಿದ್ದರಾಜು ಮತ್ತು ರಾಜಮ್ಮ ವಾಸ್ತವವಾಗಿ ಹತ್ಯೆಗೀಡಾದ ಬಾಲಕಿಯ ಸಂಬಂಧಿಕರೇ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿರಬಹುದು. ಆದರೆ, ಕದ್ದುಮುಚ್ಚಿ ನಡೆಯುತ್ತಿದ್ದ ರಾಸಲೀಲೆ, ಬಾಲಕಿಯ ಕಣ್ಣಿಗೆ ಬಿದ್ದಿದ್ದೇ ಆಕೆಯ ಬಾಳು ಕಮರಿ ಹೋಗುವಂತೆ ಮಾಡಿತು.

ಈ ಇಬ್ಬರು ಹಂತಕರು ಬಾಲಕಿ ತಂದೆಯ ಸಂಬಂಧಿಕರು. ಇವರ ರಾಸಲೀಲೆ ಬಾಲಕಿ ಕಣ್ಣಿಗೆ ಬಿದ್ದ ಎರಡೇ ಗಂಟೆಯಲ್ಲಿ ಆಕೆಯ ಜೀವ ತೆಗೆದಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಬಾಲಕಿಯ ಶವದ ಮುಂದೆ ಮೊಸಳೆ ಕಣ್ಣೀರಿಟ್ಟಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಆಕೆಯ ತಾಯಿ ತಂದೆಗೆ ಸಮಾಧಾನ ಹೇಳಿದ್ದಾರೆ. ಆದರೆ, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರಿಗೆ ಹಲವು ಶಂಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ರಾಜಮ್ಮನ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಆಕೆಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲದೆ, ಮೊಬೈಲ್ ಕರೆಗಳ ಮಾಹಿತಿಯನ್ನು ಕಲೆಹಾಕಿದ್ದಾರೆ. ಇದರಿಂದ ಬಾಲಕಿಯ ಹತ್ಯೆಗೆ ಇವರೇ ಕಾರಣ ಎಂಬ ನಿರ್ಧಾರಕ್ಕೆ ಬಂದು ಅವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದಾಗ ವಿಷಯ ಬಾಯ್ಬಿಟ್ಟಿದ್ದಾರೆ. ಅಂದು ಬೆಳಿಗ್ಗೆ 8.30ರಲ್ಲಿ ಬಾಲಕಿ ಈ ಇಬ್ಬರ ರಾಸಲೀಲೆಯ ದೃಶ್ಯವನ್ನು ನೋಡಿದ್ದಾಳೆ. 10.30ರ ವೇಳೆಗೆ ಈಕೆಯನ್ನು ಅವರಿಬ್ಬರು ಕೊಂದಿದ್ದಾರೆ ಎಂಬುದು ವಿಚಾರಣೆಯಿಂದ ಬಯಲಾಗಿದೆ.

Translate »