ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಮಾಡಿದಂತೆ
ಮೈಸೂರು

ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಮಾಡಿದಂತೆ

July 2, 2019

ಮೈಸೂರು,ಜು.1(ಆರ್‍ಕೆ)- ಸತ್ಯ ಶೋಧಿಸದೇ ಸುದ್ದಿ ಮಾಡುವುದು ದ್ರೋಹ ಬಗೆದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಬಿಜಿ, ರಾಜಶೇಖರ ಕೋಟಿ, ಅಂಶಿ ಪ್ರಸನ್ನಕುಮಾರ್ ರಂತಹ ಹಿರಿಯರು ಬೆಳೆಸಿದ ಮೈಸೂರು ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ. ಪತ್ರಕರ್ತರಿಗೆ ಜವಾಬ್ದಾರಿಯೂ ಇದೆ. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಬೇಕು ಎಂದರು.

ವಿಷಯಾಧಾರಿತ ಹಾಗೂ ಸತ್ಯಾಧಾರಿತ ಸುದ್ದಿ ಗಳನ್ನು ಜನರು ಬಯಸುತ್ತಾರೆ. ಕೃಷಿ, ಆರೋಗ್ಯ, ಸರ್ಕಾರದ ಕಾರ್ಯಕ್ರಮಗಳನ್ನು ಜನರಿU ತಲುಪಿ ಸಬೇಕು. ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಬಹುದು ಎಂದ ಸಚಿವರು, ಈ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ದಲ್ಲೇ ಸತ್ಯ-ದಿಟ್ಟ ಸುದ್ದಿಗಳನ್ನು ಮಾಡುತ್ತೇವೆಂದು ಪ್ರತಿಜ್ಞೆ ಮಾಡಿ ಎಂದರಲ್ಲದೇ, ಪತ್ರಿಕಗಳಿಂದಲೇ ತಾವು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆಂದು ಸ್ಮರಿಸುವು ದನ್ನು ಮರೆಯಲಿಲ್ಲ.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿ ಅವರು, ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುವುದು ಮಹಾ ಪರಾಧ. ವೈದ್ಯರು ಮಾನವ ದೇಹವನ್ನಷ್ಟೇ ಸರಿಪ ಡಿಸುತ್ತಾರೆ. ಆದರೆ ಪತ್ರಕರ್ತರು ಇಡೀ ಸಮಾಜ ವನ್ನು ಸರಿದಾರಿಗೆ ತರುವ ದನ್ವಂತರಿ ಯಾಗಿ ಕೆಲಸ ಮಾಡುವುದರಿಂದ ಇದು ಅದ್ಭುತ ವೃತ್ತಿ ಎಂದರು.

ಈ ಹಿಂದಿನಂತೆ ಆದರ್ಶವಾಗಿ ಉಳಿದಿಲ್ಲವಾ ದ್ದರಿಂದ ಮಾಧ್ಯಮಗಳ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಜಾಹೀರಾತು, ಪ್ರಸರಣ ಸಂಖ್ಯೆ ಹೆಚ್ಚಿಸುವ ಸಲುವಾಗಿ ಪತ್ರಿಕೆಗಳ ಬೆಲೆ ಕಡಿಮೆ ಮಾಡಲು ಪೈಪೋಟಿ ನಡೆಸಲಾಗುತ್ತದೆ. ವೆಚ್ಚ ಭರಿಸಲು ಜಾಹೀರಾತು ಅನಿವಾರ್ಯವಾದರೂ, ಪೇಯ್ಡ್ ನ್ಯೂಸ್ ಮಾಡುವುದು ಅಭಿವ್ಯಕ್ತಿ ಸ್ವಾತಂ ತ್ರ್ಯದ ದುರುಪಯೋಗವೇ ಸರಿ ಎಂದ ಅವರು, ಸಮಾಜದ ಕೇಡಿನ ವಿರುದ್ಧ ಬರೆದರೆ ಯಾರೂ ವಿರೋಧಿಸುವುದಿಲ್ಲ. ಸಂವಿಧಾನವೂ ನಮ್ಮನ್ನು ರಕ್ಷಿಸುತ್ತದೆಯಾದ್ದರಿಂದ ಆತ್ಮಶೋಧನೆ ಮಾಡಿ ಕೊಂಡು ಜನರ ದನಿಯಾಗಿ ಕೆಲಸ ಮಾಡೋಣ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಸಾಧನೆಗೈದ ಸಂಯುಕ್ತ ಕರ್ನಾಟಕ ಮುಖ್ಯ ಉಪ ಸಂಪಾದಕ ಎಂ.ಟಿ.ಮಹದೇವ, ಯಶ್‍ಟೆಲ್ ಟಿವಿ ಪ್ರಧಾನ ಸಂಪಾದಕಿ ಬಿ.ವೈ. ಸಾಹಿತ್ಯ, ಆಂದೋಲನ ವರದಿಗಾರ ಎಂ.ನಾರಾ ಯಣ, ಪ್ರಜಾವಾಣಿ ಛಾಯಾಗ್ರಾಹಕಿ ಬಿ.ಆರ್. ಸವಿತಾ, ಪ್ರಜಾ ಟಿವಿಯ ಸೋಮಶೇಖರ ಚಿಕ್ಕಮರಳಿ ಹಾಗೂ ದೂರದರ್ಶನದ ರಾಮು ಅವರನ್ನು ಜಿಟಿಡಿ ಸನ್ಮಾನಿಸಿದರಲ್ಲದೆ, ವಿಜಯವಾಣಿ ಉಪಸಂಪಾದಕ ಹೆಚ್.ಕೆ.ಗುರುಪ್ರಸಾದ್, ಟೈಮ್ಸ್ ಆಫ್ ಇಂಡಿಯಾದ ಛಾಯಾಗ್ರಾಹಕ ಎಸ್.ಆರ್. ಮಧುಸೂಧನ್, ಪಬ್ಲಿಕ್ ಟಿವಿ ವರದಿಗಾರ ಕೆ.ಪಿ.ನಾಗ ರಾಜ್, ಹಾಗೂ ಪಬ್ಲಿಕ್ ಟಿವಿ ಛಾಯಾಗ್ರಾಹಕ ಈ.ಕಾರ್ತಿಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‍ಬಾಬು, ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಬಿ.ರಾಘವೇಂದ್ರ, ಪದಾಧಿ ಕಾರಿಗಳಾದ ಬಾಬು, ಧರ್ಮಪುರ ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷ ಗೌರಮ್ಮ ಸೋಮಶೇಖರ್, ಶಾಸಕರಾದ ಬಿ.ಹರ್ಷ ವರ್ಧನ್, ಆರ್. ಧರ್ಮಸೇನಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪಾ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಅವರು ಭಾಗವಹಿಸಿದ್ದರು.

ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು
ಸಮರ್ಥಿಸಿಕೊಂಡ ಬಿಜೆಪಿ ಶಾಸಕ
ಮೈಸೂರು,ಜು.1(ಆರ್‍ಕೆ)-ರಾಜಕೀಯ ಒತ್ತಡದಿಂದ ಬಾಯ್ತಪ್ಪಿ ಮಾತನಾಡಿದ್ದನ್ನೇ ಮಾಧ್ಯಮ ಗಳಲ್ಲಿ ವೈಭವೀಕರಿಸಿ ಪದೇ ಪದೆ ಬಿತ್ತರಿಸಿ ರಾಜಕಾರಣಿಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಕ್ರಮ ವಿಷಾಧನೀಯ ಎಂದು ನಂಜನಗೂಡು ಶಾಸಕ ಬಿ.ಹರ್ಷ ವರ್ಧನ ಅವರು ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪ್ರತಿಭಟನಾಕಾರರಿಗೆ `ಓಟ್ ಹಾಕೋದು ಮೋದಿಗೆ- ಕೆಲಸ ಮಾತ್ರ ನಾವು ಮಾಡಬೇಕಾ’ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಯಾವುದೋ ಒತ್ತಡದಲ್ಲಿ ಹೇಳಿದ್ದನ್ನೇ ಬೆಳಿಗ್ಗೆಯಿಂದ ಸಂಜೆಯವರೆಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ತೋರಿಸಿದ್ದರಲ್ಲದೇ ಅದಕ್ಕೊಂದು ಚರ್ಚೆ ಏರ್ಪಡಿಸಿ ಟಿವಿಗಳಲ್ಲಿ ಪ್ರಸಾರ ಮಾಡಿದ್ದನ್ನು ಉದಾಹರಿಸುವ ಮೂಲಕ ಸಿಎಂ ಕುಮಾರಸ್ವಾಮಿ ಯವರ ಹೇಳಿಕೆಯನ್ನು ವಿವಾದಕ್ಕೆ ಸಿಲುಕಿಸಿದ್ದೀರಿ ಎಂದು ಹೇಳಿದರು. ಅನಾರೋಗ್ಯ, ರಾಜಕೀಯ ಒತ್ತಡ ಹಾಗೂ ರಾಜ್ಯದ ಆಡಳಿತದ ಜವಾಬ್ದಾರಿ ಹೊತ್ತಿರುವ ಸಿಎಂ ಕುಮಾರಸ್ವಾಮಿ ಅವರು ಆ ಒತ್ತಡದ ವೇಳೆ ಆಡಿದ ಮಾತನ್ನೇ ಹಿಡಿದುಕೊಂಡು ಪದೇ ಪದೆ ಟಿವಿಗಳಲ್ಲಿ ಬಿತ್ತರಿಸಲಾಯಿತು. ಅದರಿಂದ ಜನರಿಗೆ ರಾಜಕಾರಣಿಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದ ಅವರು, ಏನೋ ಬಾಯ್ತಪ್ಪಿ ಮಾತನಾಡಿದ್ದನ್ನೇ ದೊಡ್ಡದು ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ಮಾಧ್ಯಮಗಳಲ್ಲಿ ಇಂದು ಬಳಸುತ್ತಿರುವ ಭಾಷೆ, ಪದ ಬಳಕೆ ಮಿತಿ ಮೀರಿವೆ. ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಯ ಗುಣಮಟ್ಟ ಸ್ಟ್ಯಾಂಡರ್ಡ್ ಆಗಿತ್ತು. ಟಿವಿಗಳ ಸುದ್ದಿ, ಚರ್ಚೆಗಳನ್ನು ನೋಡಿದರೆ ಈಗ ನ್ಯೂಸ್ ಚಾನೆಲ್‍ಗಳನ್ನೇ ನೋಡಬಾರದೆನಿಸುತ್ತಿದೆ ಎಂದ ಹರ್ಷವರ್ಧನ, ನಂಜನಗೂಡಲ್ಲಿ ತಮ್ಮ ಮಾವ (ವಿ.ಶ್ರೀನಿವಾಸ ಪ್ರಸಾದ್)ನವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮರು ದಿನದಿಂದಲೇ ಅವರ ವಿರುದ್ಧ ಪತ್ರಿಕೆಗಳಲ್ಲಿ ವರದಿ ಮಾಡತೊಡಗಿದರು ಎಂದರು. ಆ ಕಾರಣಕ್ಕಾಗಿ ನಾನು ಅಂತಹ ಪತ್ರಿಕೆ ಓದುವುದನ್ನೇ ನಿಲ್ಲಿಸಿದ್ದೇನೆ. ಅದರ ವರದಿಗಾರನಿಂದಲೂ ದೂರ ಉಳಿದಿದ್ದೇನೆ. ಮಾಧ್ಯಮಗಳು ಜವಾಬ್ದಾರಿಯಿಂದ ಸ್ಟ್ಯಾಂಡರ್ಡ್ ಉಳಿಸಿಕೊಂಡು ಕೆಲಸ ಮಾಡುವ ಅವಶ್ಯವಿದೆ ಎಂದು ಅವರು ಕಿವಿಮಾತು ಹೇಳಿದರು.

ಸಾಹಿತಿಗಳು, ಲೇಖಕರು ಕನ್ನಡ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದ್ದಾರೆ
ಮೈಸೂರು, ಜು. 1(ಆರ್‍ಕೆ)- ನಾಡಿನ ಸಾಹಿತಿಗಳು ಹಾಗೂ ಲೇಖಕರು ಕನ್ನಡ ಪತ್ರಿಕೋದÀ್ಯಮಕ್ಕೆ ಬುನಾದಿ ಹಾಕಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಐಸಿಎಸ್‍ಎಸ್‍ಆರ್‍ನ ಸೀನಿಯರ್ ಪ್ರೊಫೆಸರ್ ಫೆಲೋ ಡಾ. ಉಷಾರಾಣಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ಧ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಸಣ್ಣ ಪತ್ರಿಕೆಗಳ ತವರಾದ ಮೈಸೂರಲ್ಲಿ ಶತಮಾನ ಪೂರೈಸಿರುವ `ಸಾಧ್ವಿ’ `ಸುಧರ್ಮ’ದಂತಹ ಪತ್ರಿಕೆಗಳು ವೃತ್ತಿ ಮತ್ತು ಶಿಕ್ಷಣದ ನಡುವಿನ ಸೇತುವೆಯಾಗಿ ಕೆಲಸ ಮಾಡಿದ್ದವು ಎಂದರು.

ಈಗ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಅಪಾರವಾಗಿ ಬೆಳೆದಿದೆ. ಸಾಹಿತಿಗಳು ಹಾಗೂ ಲೇಖಕರು ಕನ್ನಡ ಪತ್ರಿಕೋಧ್ಯಮಕ್ಕೆ ಬುನಾದಿ ಹಾಕಿದ್ದರು. ವಚನ ಸಾಹಿತ್ಯದ ನಂಟಿನಿಂದಾಗಿ ಭಾಷೆಯನ್ನು ಸರಳೀಕರಿಸಿ ಜನಸಾಮಾನ್ಯರಿಗೆ ಸುಲಭವಾಗಿ ವಿಷಯ ಅರ್ಥವಾಗುವಂತೆ ಮಾಡಿರು ವುದನ್ನು ಸ್ಮರಿಸಬಹುದು ಎಂದು ಅವರು ನುಡಿದರು. ಸಾಹಿತ್ಯ ಕೃತಿಗಳು ಬಂದಂತೆ ಪತ್ರಿಕೆಗಳೂ ಬಂದವು. ಸ್ವಾತಂತ್ರ್ಯ ಪೂರ್ವದಲ್ಲಿ 720 ಪತ್ರಿಕೆಗಳು ಅರುಣೋಧಯ, ನವೋಧಯ ಯುಗದಲ್ಲಿ ಬಂದವು. ನಂತರದ ನವ್ಯ ಯುಗದಲ್ಲಿ ಲಂಕೇಶ, ಯುಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್‍ರಂತಹವರು ಪತ್ರಿಕೆಗಳನ್ನು ಸಂಪಾದಿಸಿದ ವಿಚಾರ ಮಂಥನ ನಡೆಸಿದರು ಎಂದ ಪ್ರೊ.ಉಷಾರಾಣಿ ಅವರು, ವಿಚಾರವಂತರಾಗದೇ ಪತ್ರಕರ್ತರಾಗಲು ಸಾಧ್ಯವಿಲ್ಲ. ಸಾಮಾಜಿಕ ಸ್ಪಂದನೆ, ಜನರ ಧನಿಯಾಗಿ ಸಾಮಾಜಿಕ ಕಾಳಜಿ ಇರಬೇಕು ಎಂದು ಸಲಹೆ ನೀಡಿದರು.

ಇಂಟರ್‍ನೆಟ್ ಬಂಡವಾಳಶಾಹಿಗಳಿಗೆ ನಾವು ಕೇವಲ ಬಳಕೆದಾರರಾಗಿದ್ದೇವೆ. ಸ್ವತಂತ್ರ ಅಸ್ತಿತ್ವ ನಮಗಿಲ್ಲ. ವಾಟ್ಸ್ ಆ್ಯಪ್, ಫೇಸ್‍ಬುಕ್ ದಾಸರಾಗಿರುವು ದರಿಂದ ಪತ್ರಿಕೋದ್ಯಮದಲ್ಲಿ ಹೊಸತನ ಬಂದಿಲ್ಲ. ದಲಿತರು, ಅಂಗವಿಕಲರು, ಶ್ರೀ ಸಾಮಾನ್ಯನ ಸಮಸ್ಯೆ ಬಗ್ಗೆ, ಆರೋಗ್ಯ, ಬಡತನದ ಬಗೆಗೆ ಪತ್ರಿಕೆಗಳು ಬೆಳಕು ಚೆಲ್ಲಬೇಕು ಎಂದೂ ಅವರು ತಿಳಿಸಿದ್ದಾರೆ.

ಬಂಡವಾಳಶಾಹಿ ಕೇಂದ್ರೀಕೃತವಾಗದೇ ಸಾರ್ವಜನಿಕರನ್ನು ಗುರಿಯಾಗಿಸಿ ಪತ್ರಿಕೆಗಳು ಸಮಾಜದ ಒಳಿತೆಗೆ ಕೆಲಸ ಮಾಡಬೇಕು, ಸಮಾಜದ ಬೆಂಬಲವಿಲ್ಲದೆ ಪತ್ರಿಕೆಗಳು ಹಾಗೂ ಪತ್ರಕರ್ತರು ಬೆಳೆಯಲು ಸಾಧ್ಯವಿಲ್ಲ ಎಂದು ಇದೇ ವೇಳೆ ಪ್ರೊ.ಉಷಾರಾಣಿ ಅವರು ಅಭಿಪ್ರಾಯಪಟ್ಟರು.

Translate »