ಗರ್ಭಿಣಿ ಮಹಿಳೆ ಕೊಲೆ ಆರೋಪ
ಮೈಸೂರು

ಗರ್ಭಿಣಿ ಮಹಿಳೆ ಕೊಲೆ ಆರೋಪ

July 2, 2019

ಮೈಸೂರು,ಜು.1(ಎಸ್‍ಪಿಎನ್)- ಹೆಚ್ಚಿನ ವರದಕ್ಷಿಣೆಗಾಗಿ 7 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ, ನೇತು ಹಾಕಿ ಪರಾರಿಯಾಗಿರುವ ಗಂಡ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಮಾರಶೆಟ್ಟ ಹಳ್ಳಿ ಗ್ರಾಮಸ್ಥರು ಕೆ.ಆರ್.ಆಸ್ಪತ್ರೆ ಮುಂಭಾಗದಲ್ಲಿ ದಿಢೀರ್ ರಸ್ತೆ ತಡೆ ನಡೆಸಿ, ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ನಂತರ ಮೃತ ಸೌಮ್ಯರ ಅಣ್ಣ ರಾಜು ಮಾಧ್ಯಮಗಳೊಂದಿಗೆ ಮಾತನಾಡಿ, `ಒಂದು ವರ್ಷದ ಹಿಂದೆ ಯರಗನಹಳ್ಳಿ ಶಿವು ಎಂಬಾತನಿಗೆ ನನ್ನ ತಂಗಿ ಸೌಮ್ಯರನ್ನು ಅದ್ಧೂರಿ ಮದುವೆ ಮಾಡಿಕೊಟ್ಟೆವು. ಮದುವೆಯಾದ ಮೂರು ತಿಂಗಳ ಗರ್ಭಿಣಿಗೆ ಅಬಾರ್ಷನ್ ಮಾಡಿಸಿ, ಸಿಂಗಪುರ್ ಪ್ರವಾಸಕ್ಕೆ ತೆರಳಿದ್ದರು.

ಪದೇಪದೆ ಶಿವು ವರದಕ್ಷಿಣೆ ತರುವಂತೆ ನನ್ನ ತಂಗಿ ಸೌಮ್ಯರನ್ನು ಪೀಡಿಸುತ್ತಿದ್ದ. ಈ ಬಗ್ಗೆ ಸೌಮ್ಯ ನಮ್ಮ ಬಳಿ ಹಲವು ಬಾರಿ ದುಃಖ ತೋಡಿಕೊಂಡಿದ್ದಳು. ಈ ಬಗ್ಗೆ ಯರಗನಹಳ್ಳಿಯಲ್ಲಿ ಯಜಮಾನರ ಜತೆ ರಾಜೀ-ಸಂಧಾನ ಮಾಡಿದ್ದೆವು. ಮಾತುಕತೆ ಯಂತೆ ಲಕ್ಷಾಂತರ ರೂ. ವರದಕ್ಷಿಣೆ ನೀಡಿದೆವು. ಶಿವು ಮನೆಯ ವರು ಅಷ್ಟಕ್ಕೇ ತೃಪ್ತರಾಗದೇ ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸಿ ಚಿತ್ರಹಿಂಸೆ ನೀಡಿದ್ದಾರೆ. ತುಂಬು ಗರ್ಭಿಣಿಯಿಂದ ಮೊಬೈಲ್ ಕಿತ್ತುಕೊಂಡು ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿ, ಈ ದುರ್ಘಟನೆಗೆ ಕಾರಣರಾಗಿದ್ದಾರೆ ಎಂದು ಆರೋ ಪಿಸಿ ಮಾಧ್ಯಮಗಳ ಮುಂದೆ ರೋದಿಸಿದರು.

`ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣಲ್ಲ. ಆಕೆಯ ಗಂಡ ಮತ್ತು ಮನೆಯವರೇ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆಕೆಯ ಜತೆ 7 ತಿಂಗಳ ಗಂಡು ಮಗು ಕೂಡ ಮೃತಪಟ್ಟಿದೆ. ಪಿಶಾಚಿಗಳು ಎರಡು ಜೀವಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದಾರೆ. ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇವರೇಕೆ ತಲೆಮರೆಸಿ ಕೊಳ್ಳಬೇಕಿತ್ತು? ಈ ಕೃತ್ಯ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆದರೆ, ಪೊಲೀಸರು ತಡವಾಗಿ ಎಫ್‍ಐಆರ್ ದಾಖಲಿಸಿದ್ದಾರೆ.

ಆರೋಪಿತರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದ್ದು, ಆರೋಪಿಗಳು ತಪ್ಪಿಕೊಳ್ಳುವ ಆತಂಕವಿದೆ. ಆದ್ದರಿಂದ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು. ಮುಂದೆ ಇಂಥ ದುರ್ಘಟನೆಗಳು ಸಮಾಜದಲ್ಲಿ ನಡೆಯಬಾರದು ಎಂದು ಒತ್ತಾಯಿಸಿದರು. ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ನಗರದ ಕೆ.ಆರ್.ಆಸ್ಪತ್ರೆ ಶವಾಗಾರದ ಮುಂದೆ ಸೋಮವಾರ ಜಮಾವಣೆಗೊಂಡು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮೃತ ಸೌಮ್ಯಳ ಶವವನ್ನು ಗಂಡನ ಮನೆ ಬಳಿ ಪ್ರದರ್ಶನಕ್ಕಿಡಲು ಅನುಮತಿ ನೀಡಬೇಕೆಂದು ಪೊಲೀಸರ ಬಳಿ ಗ್ರಾಮಸ್ಥರು ಬೇಡಿಕೆಯಿಟ್ಟರು. ಆದರೆ, ಪ್ರತಿಭಟನಾಕಾರರ ಬೇಡಿಕೆಗೆ ಎಸಿಪಿ ಗಜೇಂದ್ರಪ್ರಸಾದ್ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ತೀವ್ರಗೊಳಿಸಿದರು. ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮಾರಶೆಟ್ಟಿಹಳ್ಳಿಗೆ ಅಂತ್ಯಸಂಸ್ಕಾ ರಕ್ಕೆ ಬಿಗಿಭದ್ರತೆಯಲ್ಲಿ ತೆಗೆದುಕೊಂಡು ಹೋಗಲಾಯಿತು.

ಘಟನೆ ಹಿನ್ನೆಲೆ: ಮಾರಶೆಟ್ಟಿಹಳ್ಳಿ ನಿವಾಸಿ ರಂಗೇಗೌಡರ ಪುತ್ರಿ ಸೌಮ್ಯ (24) ಮೃತ ಮಹಿಳೆ. ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದರು. ಈ ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆ ಬಳಿ ಬಂದಾಗ ಚಿಕಿತ್ಸೆ ಫಲಕಾರಿಯಾಗದೇ ಸೌಮ್ಯ ಮೃತಪಟ್ಟಿದ್ದಾರೆ. ಇದರಿಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪತಿ, ಆತನ ಮನೆಯವರು ಪರಾರಿಯಾಗಿದ್ದರು. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »