ಮುಖ್ಯಮಂತ್ರಿಯಾಗಿ ಮುಂದುವರೆಯಿರಿ…!
ಮೈಸೂರು

ಮುಖ್ಯಮಂತ್ರಿಯಾಗಿ ಮುಂದುವರೆಯಿರಿ…!

May 25, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ದಯನೀಯ ಸೋಲಿನ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಡೆದಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಕಠಿಣ ಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನೀವಲ್ಲದೆ ಬೇರೆ ಯಾರೂ ಸಮರ್ಥವಾಗಿ ನಿರ್ವ ಹಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತು ಗಳಲ್ಲಿ ತಿಳಿಸಿದ್ದಾರೆ.

ಪುತ್ರ ಹಾಗೂ ತಂದೆಯ ಸೋಲಿ ನಿಂದ ವಿಚಲಿತರಾ ಗಿದ್ದ ಮುಖ್ಯಮಂತ್ರಿ ಯವರು ನಿನ್ನೆ ಸಂಜೆ ರಾಹುಲ್‍ಗಾಂಧಿ ಅವರನ್ನು ಸಂಪರ್ಕಿಸಿ, ರಾಜ್ಯ ಕಾಂಗ್ರೆಸ್‍ನ ಕೆಲವು ನಾಯಕರ ಪಿತೂರಿಗೆ ನಾವು ಬಲಿ ಯಾಗಿದ್ದೇವೆ. ಸರ್ಕಾರ ರಚನೆಗೂ ಮುನ್ನವೇ ನಿಮ್ಮ ಸಹವಾಸ ಬೇಡ ಎಂದು ನಮ್ಮ ಶಾಸಕರು ಹೇಳಿದ್ದರು. ಆದರೆ ತಂದೆ ಯವರ ಮಾತಿಗೆ ಕಟ್ಟು ಬಿದ್ದು, ನಾನು ನಿಮ್ಮ ಜೊತೆ ಕೈಜೋಡಿ ಸಿದೆ. ಅದಕ್ಕೆ ಸಿಕ್ಕ ಫಲ ಇಂದಿನ ಫಲಿತಾಂಶ. ನಿಮ್ಮ ಸಹ ವಾಸವೇ ಬೇಡ. ನೀವು ಯಾರನ್ನಾದರೂ, ಮುಖ್ಯಮಂತ್ರಿ ಯನ್ನಾಗಿ ಮಾಡಿಕೊಳ್ಳಿ. ಮೈತ್ರಿ ಸರ್ಕಾರವನ್ನು ನನ್ನ ಕೈಯ್ಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ. ನಾನಂತೂ ರಾಜೀನಾಮೆ ಕೊಡು ತ್ತೇನೆ ಎಂದು ಖಾರವಾಗಿ ತಿಳಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ರಾಹುಲ್‍ಗಾಂಧಿ ರಾಜಕೀಯ ಮತ್ತು ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನೀವು ಉದ್ವೇಗಕ್ಕೆ ಒಳಗಾಗಬೇಡಿ. ನಿಮ್ಮ ನಾಯಕತ್ವದಲ್ಲಿ ಉತ್ತಮ ಆಡಳಿತ ನೀಡಿದ್ದೀರಿ. ಇಂತಹ ಕಠಿಣ ಸ್ಥಿತಿಯಲ್ಲಿ ನೀವಲ್ಲದೆ ಬೇರೆಯವರು ನಿಭಾಯಿ ಸಲು ಸಾಧ್ಯವಿಲ್ಲ. ಬೇರೆ ಯಾರನ್ನೂ ನಾನು ಒಪ್ಪುವುದಿಲ್ಲ. ನೀವೇ ಮುಂದುವರಿಯಿರಿ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ನಾನು ನೋಡಿಕೊಳ್ಳುತ್ತೇನೆ. ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಬೇಡಿ ಎಂದು ರಾಹುಲ್ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಲ್ಲದೆ, ಸದ್ಯಕ್ಕೆ ಎದುರಾಗಿರುವ ಸಂಕಷ್ಟಗಳನ್ನು ಎದುರಿಸಲು ಮತ್ತು ಮೈತ್ರಿ ಸರ್ಕಾರ ಸುಗಮವಾಗಿ ಸಾಗಿಸಲು ವೇಣುಗೋಪಾಲ್ ಅವರಿಗೆ ಸೂಚಿಸುತ್ತೇನೆ ಎಂದಿದ್ದಾರೆ.

ಸುಮಾರು 10 ರಿಂದ 15 ನಿಮಿಷಗಳ ಕಾಲ ದೂರವಾಣಿಯಲ್ಲಿ ಉಭಯ ನಾಯಕರು ಮಾತನಾಡಿದ ನಂತರ ಕೊನೆಗೆ ಕುಮಾರಸ್ವಾಮಿ, ರಾಹುಲ್ ಮಾತಿಗೆ ಮಣಿದು, ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬೆಳವಣಿಗೆ ನಂತರ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿದ್ದು, ತಡರಾತ್ರಿಯಿಂದ ಇಂದು ಮಧ್ಯಾಹ್ನದವರೆಗೂ ನಾಯಕರು ಮತ್ತು ಮಂತ್ರಿಗಳು ಒಂದರ ಮೇಲೊಂದು ಸಭೆ ನಡೆಸಿದ್ದಾರೆ.

ರಾಹುಲ್ ಸಲಹೆಯಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಮನೆಯಲ್ಲಿ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ಕಾಂಗ್ರೆಸ್ ಸಚಿವರ ಸಭೆ ನಡೆಸಿ, ಕುಮಾರಸ್ವಾಮಿ ನಾಯಕತ್ವದಲ್ಲೇ ಮುಂದುವರಿಯುವ, ಮತ್ತವರಿಗೆ ಪೂರ್ಣ ಬೆಂಬಲ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೂ ಮುನ್ನ ಸಿದ್ದರಾಮಯ್ಯ ಆಪ್ತ ಸಚಿವರೊಟ್ಟಿಗೆ ಚರ್ಚೆ ನಡೆಸಿ, ಅಲ್ಲಿಂದಲೇ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಬೇಡಿ.

ಇಂತಹ ಸನ್ನಿವೇಶದಲ್ಲಿ ಅಧಿಕಾರ ತ್ಯಜಿಸಿದರೆ ಉಭಯ ಪಕ್ಷದ ಮುಖಂಡರು ಸಂಕಷ್ಟಕ್ಕೆ ಸಿಲುಕುತ್ತೇವೆ. ಬಿಜೆಪಿ ಇದನ್ನು ದುರುಪಯೋಗಪಡಿಸಿಕೊಂಡು ನಮ್ಮಗಳ ಮೇಲೆ ಇಲ್ಲದ ಸಲ್ಲದ ಮೊಕದ್ದಮೆ ಹೂಡಿ, ಜೈಲಿಗೆ ಕಳುಹಿಸುವುದಕ್ಕೂ ಹೇಸುವುದಿಲ್ಲ.

ಚುನಾವಣಾ ಸಂದರ್ಭದಲ್ಲೇ ನೋಡಿದ್ದೇವೆ. ಕೇಂದ್ರ ಆದಾಯ ತೆರಿಗೆ ಇಲಾಖೆಯನ್ನು ಹೇಗೆ ದುರ್ಬಳಕೆ ಮಾಡಿಕೊಂಡರು ಎಂದು ಇದು ತಿಳಿದು ನಾವು ಸರ್ಕಾರವನ್ನು ಬಿಜೆಪಿ ತೆಕ್ಕೆಗೆ ನೀಡುವುದು ಬೇಡ. ಎಂತಹ ಸಂಕಷ್ಟಗಳು ಎದುರಾದರೂ, ನಾನು ನೋಡಿಕೊಳ್ಳುತ್ತೇನೆ. ನೀವು ಉತ್ತಮ ಆಡಳಿತ ನೀಡಿ, ಆದರೆ ಸಚಿವರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.

ನಮ್ಮ ಪಕ್ಷದ ಒಬ್ಬ ಶಾಸಕನು ಬಿಜೆಪಿಯತ್ತ ಸುಳಿಯಲು ಬಿಡುವುದಿಲ್ಲ. ಅದರ ಬಗ್ಗೆ ನಾನು ಭರವಸೆ ನೀಡುತ್ತೇನೆ. ಇಂದಿನಿಂದಲೇ ನಮ್ಮ ಪಕ್ಷದ ಸದಸ್ಯರನ್ನು ಜೊತೆಯಲ್ಲಿಟ್ಟುಕೊಳ್ಳಲು ಕಾರ್ಯಮಗ್ನವಾಗುವುದಲ್ಲದೆ, ನಿಮಗೆ ಬೆಂಬಲ ನೀಡಲು ಸದ್ಯದಲ್ಲೇ ಸಿಎಲ್‍ಪಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ನೀವು ಕರೆದಿರುವ ಮಂತ್ರಿ ಪರಿಷತ್ ಸಭೆಯಲ್ಲೂ ನಮ್ಮ ಪಕ್ಷದ ಸಚಿವರುಗಳು ಬೇಷರತ್ತಾಗಿ ನಿಮಗೆ ಬೆಂಬಲ ನೀಡುವುದಲ್ಲದೆ, ಆಡಳಿತದಲ್ಲಿ ವಿಶ್ವಾಸವಿದ್ದು, ಮುಂದೆಯೂ ಇದೇ ರೀತಿ ಇರುತ್ತೇವೆ ಎಂಬುದನ್ನು ಹೇಳಲಿದ್ದಾರೆ. ದುಡುಕು ನಿರ್ಧಾರ ಕೈಗೊಳ್ಳಬೇಡಿ, ನಿಮ್ಮ ನಾಯಕತ್ವದಲ್ಲೇ ಮೈತ್ರಿ ಸರ್ಕಾರ ಮುಂದುವರಿಯಲಿ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವೇಗೌಡರೂ ಕೂಡ ಮುಖ್ಯಮಂತ್ರಿಯವರ ಪಕ್ಕದಲ್ಲೇ ಉಪಸ್ಥಿತರಿದ್ದರು. ಇದಾದ ನಂತರ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆನಂತರ ಪದ್ಮನಾಭನಗರದಲ್ಲಿ ಸಚಿವರಾದ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಯುಟಿ ಖಾದರ್, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ನೀವೇ ನಮ್ಮ ನಾಯಕರಾಗಿ ಮುಂದುವರಿಯಬೇಕೆಂದು ಕೋರಿದ ಬೆಳವಣಿಗೆಯು ನಡೆದಿದೆ.

Translate »