ಹಕುಪತ್ರ ನೀಡಿದ ಜಾಗ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ
ಕೊಡಗು

ಹಕುಪತ್ರ ನೀಡಿದ ಜಾಗ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ

December 29, 2018

ಗೋಣಿಕೊಪ್ಪ: ಹಕ್ಕುಪತ್ರ ನೀಡಿರುವ ಜಾಗದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕುಂದ ಗ್ರಾಮದ ಗಿರಿಜನ ನಿವಾಸಿಗಳು ನಡೆಸು ತ್ತಿರುವ ಅಹೋರಾತ್ರಿ ಧರಣಿ ಮೂರು ದಿನ ಪೂರೈಸಿದೆ.

ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೊನ್ನಂಪೇಟೆಯಲ್ಲಿರುವ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು 100 ಕ್ಕೂ ಹೆಚ್ಚು ನಿವಾಸಿ ಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಡಿಸೆಂಬರ್ 26 ರಿಂದ ಪ್ರತಿಭಟನೆಯಲ್ಲಿ ತೊಡಗಿರುವ ನಿವಾಸಿಗಳು, ಅಲ್ಲಿನ ಮೂಲಭೂತ ಸೌಕರ್ಯ ನೀಡಿ ಜೀವನ ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

2016 ರಲ್ಲಿ ಕುಂದ ಗ್ರಾಮದ ಸರ್ವೆ ನಂ 92/1 ರಲ್ಲಿ 6 ಎಕರೆ ಭೂಮಿಗೆ ಜಿಲ್ಲಾಡಳಿತ ನಮಗೆ ಹಕ್ಕುಪತ್ರ ನೀಡಿ ಆದೇಶ ನೀಡಿದೆ. ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿ ನಲ್ಲಿ ಜಾಗ ನೋಂದಣಿಯಾಗಿದ್ದು, ಪುನರ್ವಸತಿ ಕಲ್ಪಿಸುತ್ತಿಲ್ಲ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಹಕ್ಕುಪತ್ರ ವಿತರಣೆ ಹೊರತು, ರಸ್ತೆ, ಚರಂಡಿ, ಕುಡಿಯುವ ನೀರು, ಭೂಮಿ ಸಮತಟ್ಟು ಮಾಡುವುದು, ಗಡಿ ಗುರುತಿಸುವ ಕೆಲಸ ನಡೆದಿಲ್ಲ. ನಿವಾಸಿ ಗಳಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಿಲ್ಲ ಇದರಿಂದಾಗಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದೇವೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಅಲ್ಲಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ, ನಮಗೆ ಪುನರ್ವಸತಿ ಕಲ್ಪಿಸು ವಂತೆ ಒತ್ತಾಯಿಸಿದರು. ಪುನರ್ವಸತಿ ಕಾರ್ಯ ಆರಂಭಿಸುವವರೆಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಸಂಚಾಲಕ ವೈ. ಬಿ. ಗಪ್ಪು ಮುಂದಾ ಳತ್ವದಲ್ಲಿ ಧರಣಿ ಮುಂದುವರಿದಿದೆ.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಗೋವಿಂದರಾಜು ಹಾಗೂ ಇಒ ಜಯಣ್ಣ ಆಗಮಿಸಿ 2 ದಿನಗಳಲ್ಲಿ ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆ ನೀಡಿದರು. ಇದಕ್ಕೆ ಜಗ್ಗದ ಪ್ರತಿಭನಾ ಕಾರರು ಜಿಲ್ಲಾಧಿಕಾರಿ ಮೂಲಕ ಜಾಗ ತೆರವುಗೊಳಿಸಿ, ಜಾಗವನ್ನು ಸಮತಟ್ಟು ಮಾಡಿಕೊಡಲಿ. ಅಲ್ಲಿವರೆಗೂ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದ್ದಾರೆ.

Translate »