ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ
ಮೈಸೂರು

ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ

January 8, 2020

ಮೈಸೂರು,ಜ.7(ಪಿಎಂ)-ರೈಲ್ವೆ ಖಾಸ ಗೀಕರಣ ಪ್ರಸ್ತಾಪಗಳನ್ನು ರೈಲ್ವೆ ಸಚಿವಾ ಲಯ ಕೈಬಿಡಬೇಕೆಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನೈರುತ್ಯ ರೈಲ್ವೆಯ ವಿಭಾ ಗೀಯ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಉತ್ಪಾದನಾ ಘಟಕ, ವರ್ಕ್‍ಶಾಪ್‍ಗಳನ್ನು 100 ದಿನಗಳ ಕಾರ್ಯ ಯೋಜನೆಯಡಿ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಜ.2ರಿಂದ ಪ್ರತಿಭಟನಾ ಸಪ್ತಾಹ ವನ್ನು ದೇಶವ್ಯಾಪಿ ನಡೆಸುತ್ತಿರುವ ಹಿನ್ನೆಲೆ ಯಲ್ಲಿ ಇಂದು ಮೈಸೂರಿನಲ್ಲೂ ಪ್ರತಿ ಭಟನೆ ನಡೆಸಲಾಯಿತು.

ಕಳೆದ ವರ್ಷ ಡಿ.7 ಮತ್ತು 8ರಂದು ರೈಲ್ವೆ ಕಾರ್ಯಕ್ಷಮತೆ ವೃದ್ಧಿಸುವ ಗೋಷ್ಠಿ ನೆಪದಲ್ಲಿ ನಡೆದ `ಪರಿವರ್ತನಾ ಸಂಗೋಷ್ಠಿ’ಯಲ್ಲಿ ರೈಲ್ವೆ ಮಂಡಳಿ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದು ಕೊಂಡಿದೆ. ಇದು ಸರ್ವಾಧಿಕಾರಿ ನಿಲುವಾಗಿದ್ದು, ರೈಲ್ವೆ ನೌಕರರಿಗೆ ಮಾರಕವಾಗಿದೆ. ಉದ್ಯೋಗ ಕಡಿತ, ಸಂಪೂರ್ಣ ಖಾಸಗೀಕರಣದ ಚಿಂತನೆ ಯನ್ನು ಈ ಗೋಷ್ಠಿಯಲ್ಲಿ ವ್ಯಕ್ತಪಡಿಸ ಲಾಗಿದೆ ಎಂದು ಆರೋಪಿಸಿದರು.

ಈಗಾಗಲೇ ರೈಲ್ವೆ ಸಚಿವಾಲಯ ದೇಶದ ವಿವಿಧ ಭಾಗಗಳಲ್ಲಿ ಉತ್ಪಾದನಾ ಘಟಕಗಳನ್ನು ಖಾಸಗೀಕರಣಗೊಳಿಸಲು ಯೋಜನೆ ರೂಪಿಸಿದೆ. ಕೆಲ ಮುಖ್ಯ ರೈಲು ಮಾರ್ಗಗಳನ್ನು ಖಾಸಗಿ ಆಪರೇಟ ರ್‍ಗಳಿಗೆ ವಹಿಸುವ ಪ್ರಸ್ತಾಪವನ್ನು ಈ ಕೂಡಲೇ ಕೈಬಿಡಬೇಕು. ರೈಲ್ವೆ ಸಚಿವಾ ಲಯದ ಈ ನಡೆಗಳು ಕಾರ್ಮಿಕ ವಿರೋಧಿ ಮಾತ್ರವಲ್ಲ, ಜನ ವಿರೋ ಧಿಯೂ ಆಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇಂದು ಬೆಳಿಗ್ಗೆ 8.30ರಿಂದ 9.30 ರವರೆಗೆ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ಕಾರ್ಯದರ್ಶಿ ಪಿ.ಶಿವಪ್ರಕಾಶ್, ಹಲವು ದೇಶಗಳಲ್ಲಿ ರೈಲ್ವೆಯನ್ನು ಖಾಸಗೀ ಕರಣಗೊಳಿಸಿದ ಪರಿಣಾಮ ನಷ್ಟ ಉಂಟಾಗಿ ಮತ್ತೆ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡ ಉದಾಹರಣೆಗಳಿವೆ. ಇದನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಖಾಸಗೀಕರಣದ ನಿಲುವು ಕೈಬಿಡಬೇಕು. ಖಾಸಗಿಯವರು ಕೇವಲ ಲಾಭ ನೋಡುತ್ತಾರೆಯೇ ಹೊರತು ಸೇವೆಗೆ ಆದ್ಯತೆ ನೀಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೈಸೂರು ಮಾತ್ರವಲ್ಲದೆ, ಹಾಸನ, ಪುತ್ತೂರು, ಅರಸೀಕೆರೆ ಸೇರಿದಂತೆ ನೈರುತ್ಯ ರೈಲ್ವೆಯ 14 ವಿಭಾಗಗಳಲ್ಲಿ ಇಂದು ಏಕಕಾಲದಲ್ಲಿ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಮೈಸೂರು ವಿಭಾಗೀಯ ಅಧ್ಯಕ್ಷ ಎಸ್.ಸೋಮ ಶೇಖರ್, ವಲಯ ಕಾರ್ಯಾಧ್ಯಕ್ಷ ಆರ್ತೂರ್ ಫರ್ನಾಂಡಿಸ್, ವಿಭಾಗೀಯ ಖಜಾಂಚಿ ಎಂ.ನಾಗೇಂದ್ರನ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »