ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ
ಮೈಸೂರು

ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ

August 13, 2018

ಮೈಸೂರು: ಮೈಸೂರಿನ ವಿಜಯನಗರದ ಹಿನಕಲ್ ಸಮೀಪವಿರುವ ಮುಡಾ ರೈತ ಸಂತೆ ಕಟ್ಟಡದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಇಂದು ಆರಂಭವಾಯಿತು.

ರೈತ ಸಂಘ ಹಾಗೂ ಎಪಿಎಂಸಿ ಆಶ್ರಯದಲ್ಲಿ ಆರಂಭವಾದ ಭಾನುವಾರದ ತರಕಾರಿ ಸಂತೆಯನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕ ಬಳಸದೆ ಬೆಳೆದ ಸೊಪ್ಪು, ತರಕಾರಿಗಳನ್ನು ತಂದು ನೇರವಾಗಿ ಈ ಸಂತೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಾರಕ್ಕೊಮ್ಮೆ ಭಾನುವಾರ ಮಾತ್ರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆವರೆಗೆ ತರಕಾರಿ ಮಾರುಕಟ್ಟೆ ತೆರೆದಿರುತ್ತದೆ. ಇಂದು ಸುಮಾರು 25 ಮಂದಿ ರೈತರು ಸ್ಥಳಕ್ಕೆ ಬಂದು ತರಕಾರಿ ಮತ್ತು ಸೊಪ್ಪು ಮಾರಾಟ ಮಾಡಿದ್ದು, ಸಂತೆಗೆ ಉತ್ತಮ ಪ್ರತಿಕ್ರಿಯೆ ಬರುತ್ತದೆ ಎಂದು ರೈತ ಮಹಿಳೆ ವಿದ್ಯಾ ಅವರು ತಿಳಿಸಿದರು.

ಯಾರು ಬೇಕಾದರೂ ತಾವು ತಮ್ಮ ಜಮೀನಿನಲ್ಲಿ ಬೆಳೆದ ಸೊಪ್ಪು, ತರಕಾರಿಯನ್ನು ತಂದು ಇಲ್ಲಿ ಮಾರಾಟ ಮಾಡಬಹುದು. ಆದರೆ ಅವರು ಆಧಾರ್ ಕಾರ್ಡ್ ಮತ್ತು ಜಮೀನಿನ ಆರ್‍ಟಿಸಿ ಪ್ರತಿಯನ್ನು ತೋರಿಸಬೇಕಷ್ಟೇ. ಸಾವಯವ ಕೃಷಿ ಅನುಸರಿಸದ ರೈತರೂ ಸಹ ಉತ್ಪನ್ನಗಳನ್ನು ತಂದು ಮಾರಾಟ ಮಾಡಬಹುದು. ಆದರೆ ಬೇರೆ ಕಡೆಯಿಂದ ತಂದು ಮಾರುವ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು. ಮಂಜುನಾಥ, ಯೋಗೇಶ್ ಸೇರಿದಂತೆ ಹಲವು ರೈತರು ಇಂದು ಹಾಜರಿದ್ದರು.

Translate »