ಸಿಎಂ ಕುಮಾರಸ್ವಾಮಿ ಸುಮ್ಮನಿದ್ದರೂ `ಕೈ’ ನಾಯಕರ ರಹಸ್ಯ ಕಾರ್ಯತಂತ್ರ
ಮೈಸೂರು

ಸಿಎಂ ಕುಮಾರಸ್ವಾಮಿ ಸುಮ್ಮನಿದ್ದರೂ `ಕೈ’ ನಾಯಕರ ರಹಸ್ಯ ಕಾರ್ಯತಂತ್ರ

July 21, 2019

ಬೆಂಗಳೂರು, ಜು.20(ಕೆಎಂಶಿ)-ಸರ್ಕಾರ ಉಳಿಸಿಕೊಳ್ಳುವ ಆಸೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕೈ ಬಿಟ್ಟಿದ್ದರೂ, ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಮಾತ್ರ ಕೊನೆಯ ಕಸರತ್ತು ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರಲ್ಲಿ ಸರ್ಕಾರ ಉಳಿಸಲು ಯಾವುದೇ ಅಸ್ತ್ರ ಉಳಿದಿಲ್ಲ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಉಳಿಸಲೇಬೇಕೆಂದು ಪಣ ತೊಟ್ಟಂತೆ ಹೋರಾಟ ನಡೆಸಿದ್ದಾರೆ. ಅತ್ಯಂತ ಗೌಪ್ಯವಾಗಿ ಕಾರ್ಯಚಟುವಟಿಕೆ ಮಾಡುತ್ತಿದ್ದು, ಭಿನ್ನರ ಗುಂಪನ್ನೇ ವಿಭಜಿಸಿ ಹೊರ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರಲ್ಲಿ ಎಷ್ಟು ಸಫಲರಾಗುತ್ತಾರೋ ತಿಳಿಯದು, ತಾನು ನಡೆಸುತ್ತಿರುವ ಕಾರ್ಯಾಚರಣೆ ಯಾರಿಗೂ ತಿಳಿಯಬಾರದೆಂಬ ಹಿನ್ನೆಲೆಯಲ್ಲಿ ತಮ್ಮ ಭದ್ರತಾಪಡೆ ಮತ್ತು ಸಿಬ್ಬಂದಿಯನ್ನು ದೂರವಿಟ್ಟು, ಒಬ್ಬರೇ ದಿನವಿಡೀ ಓಡಾಟ ಮಾಡಿದ್ದಾರೆ.

ಶಿವಕುಮಾರ್, ನಗರದ ಹೊರವಲಯದ ರೆಸಾರ್ಟ್‍ಗೆ ಎರಡು ಬಾರಿ ಹೋಗಿ ಬಂದಿದ್ದಾರೆ. ಇವರ ಕಾರ್ಯಾಚರಣೆಗೆ ರಾಷ್ಟ್ರೀಯ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ತಾವು ನಡೆಸುತ್ತಿ ರುವ ಕಾರ್ಯಾಚರಣೆ ವಿಷಯವನ್ನು ಸಿಎಲ್‍ಪಿ ನಾಯಕ ಸಿದ್ದರಾಮಯ್ಯರಿಗಾಗಲಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗಾಗಲೀ ಮಾಹಿತಿ ನೀಡುತ್ತಿಲ್ಲ. ಅಗತ್ಯ ಕಂಡು ಬಂದರೆ ಮಾತ್ರ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಕಾರ್ಯಾಚರಣೆ ತಿಳಿದೇ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಬಿಜೆಪಿ ಮತ್ತಷ್ಟು ಭದ್ರತೆ ನೀಡಿದೆ. ಇದರ ನಡುವೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‍ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಯವರು ಕೆಲವು ಮುಖಂಡರನ್ನು ಗೌಪ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಹೆಚ್ಚಿನ ವಿವರ ತಿಳಿದು ಬಂದಿಲ್ಲ. ದೇವೇಗೌಡರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅತೃಪ್ತರನ್ನು ಮನವೊಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಸೇರಿದಂತೆ ಎಲ್ಲರೂ ಒಟ್ಟಾಗಿಯೇ ಹೋಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವು. ಹಿರಿಯ ನಾಯಕರ ಒತ್ತಡಕ್ಕೆ ಮಣಿದು ನಾನು ರಾಜೀನಾಮೆ ವಾಪಸ್ ಪಡೆದಿದ್ದೇನೆ. ನಾವೆಲ್ಲ ಒಟ್ಟಾಗಿ ಕುಳಿತು ರಾಜೀನಾಮೆ ನೀಡುವುದರ ಬಗ್ಗೆ ಚರ್ಚಿಸಿದ್ದೆವು. ಈ ಬಗ್ಗೆ ಎಸ್.ಟಿ.ಸೋಮ ಶೇಖರ್ ಹೇಳಿರುವುದು ಎಲ್ಲ ಸತ್ಯ. ಎಂ.ಟಿ.ಬಿ.ನಾಗರಾಜ್ ಅವರು ಹೇಳಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಶ್ವನಾಥ್ ಅವರನ್ನು ಒಂದು ಬಾರಿ ಭೇಟಿಯಾಗಿದ್ದೆ ಅಷ್ಟೆ ಎಂದರು. ಈ ಮಧ್ಯೆ ಸಚಿವ ಜಮೀರ್ ಅಹಮದ್‍ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಅವರನ್ನು ಭೇಟಿ ಮಾಡಿ, ಸೋಮವಾರ ಸಂಜೆ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹಾಜರಿದ್ದು, ಮತ ನೀಡುವಂತೆ ಅವರನ್ನು ಕೋರಿಕೊಂಡಿದ್ದಾರೆ.

ಆಸ್ಪತ್ರೆಯಲ್ಲೇ ಸುಮಾರು 30 ನಿಮಿಷಗಳ ಕಾಲ ಉಭಯ ನಾಯಕರು ಚರ್ಚೆ ಮಾಡಿದ್ದು, ನಾಗೇಂದ್ರ ಅವರ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಮುಖ್ಯಮಂತ್ರಿ ಅವರು ಸೋಮವಾರ ವಿಶ್ವಾಸ ಮತ ಯಾಚನೆಗೆ ಕೊನೆ ಹಾಡಲಿದ್ದು, ಅಷ್ಟರವೇಳೆಗೆ ಸರ್ಕಾರ ಉಳಿಸಿಕೊಳ್ಳಲು ಒಂದು ಪ್ರಯತ್ನವಂತೂ ನಡೆದಿದೆ. ಉಳಿದಿರುವ ಶಾಸಕರನ್ನು ಭದ್ರವಾಗಿಟ್ಟು ಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್, ರೆಸಾರ್ಟ್‍ನಲ್ಲೇ ತಮ್ಮ ಶಾಸಕರನ್ನು ಬೀಡು ಬಿಡಿಸಿದ್ದಾರೆ. ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸದಸ್ಯರಿಗೆ ವಿಪ್ ನೀಡುವುದೂ ಸೇರಿದಂತೆ ಕೆಲವು ಅನುಮಾನ ಪರಿಹರಿಸಬೇಕೆಂದು ಸಿದ್ದರಾಮಯ್ಯ ಸುಪ್ರೀಂಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದ್ದು, ಅಂದು ವಿಪ್ ಸಂಬಂಧ ಆದೇಶ ಹೊರ ಬಿದ್ದರೆ ಮೈತ್ರಿ ಸರ್ಕಾರಕ್ಕೆ ಸ್ವಲ್ಪ ಉಸಿರು ಬರುತ್ತದೆ.

ವಿಶ್ವಾಸಮತ ಸಾಬೀತು ಮಾಡುತ್ತೇವೆ

ಮುಂಬೈನಲ್ಲಿರುವ ಅತೃಪ್ತ ಶಾಸಕರೆಲ್ಲಾ ರಾಜ್ಯಕ್ಕೆ ವಾಪಸ್ ಬಂದ ಮೇಲೆ ಒಂದು ಸಿನಿಮಾ ಮಾಡಬಹುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಇಂದು ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸೋಮವಾರ ವಿಶ್ವಾಸಮತವನ್ನು ಸಾಬೀತು ಮಾಡುತ್ತೇವೆ. ಎಲ್ಲಿ, ಏನು ತಪ್ಪಾಗಿದೆ ಎಂದು ಚರ್ಚೆ ಮಾಡುತ್ತೇವೆ. ಜನಕ್ಕೆ ತಿಳಿಸುತ್ತೇವೆ. ನಮಗೆ ವಿಶ್ವಾಸ ಇದೆ. ಪ್ರತಿಪಕ್ಷದಲ್ಲಿರುವ ಶಾಸಕರೂ ನಮಗೆ ಬೆಂಬಲ ನೀಡುತ್ತಾರೆ ಎಂದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ರಾಜ ಕಾರಣ ಅವರಿಗೆ, ನಮ್ಮ ರಾಜಕಾರಣ ನಮಗೆ, ಅತೃಪ್ತ ಶಾಸಕರು ವಾಪಸ್ ಬರಲು ಸಿದ್ಧರಿದ್ದಾರೆ. ಆದರೆ ಮುಂಬೈನಲ್ಲಿರುವ ಶಾಸಕರು ಇಂದಿಗೂ ಗನ್ ಪಾಯಿಂಟ್‍ನಲ್ಲಿದ್ದಾರೆ. ಯಾರಿಗೂ ಮುಕ್ತವಾಗಿ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಬಿಡುತ್ತಿಲ್ಲ, ಮೊಬೈಲ್ ಫೆÇೀನ್ ಅನ್ನು ಕಿತ್ತುಕೊಂಡಿದ್ದಾರೆ. ಆರು ಜನ ಶಾಸಕರನ್ನು ಲೋನಾವಾಲಾದಲ್ಲಿ, ಇನ್ನು ಉಳಿದ ಶಾಸಕರನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಪೆÇಲೀಸ್ ಬಿಗಿ ಭದ್ರತೆ ಕಲ್ಪಿಸಿದ್ದಾರೆ ಎನ್ನುವ ಮೂಲಕ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆಂದು ಹೇಳಿದರು. ರಾಜ್ಯ ರಾಜಕಾರಣದ ಪ್ರಶ್ನೆಗೆ ಉತ್ತರಿಸಿದ ಅವರು, ಏನು ಮಾಡುವುದು ನಮ್ಮ ಸಂಸ್ಕೃತಿ ಈ ಮಟ್ಟಕ್ಕೆ ಬಂದಿದೆ. ಶಾಸಕರೆಲ್ಲಾ ವಾಪಸ್ ರಾಜ್ಯಕ್ಕೆ ಬಂದ ಮೇಲೆ ಒಂದು ಸಿನಿಮಾ ತೆಗೆಯಬಹುದು, ಅಷ್ಟು ರೋಚಕವಾಗಿರಲಿದೆ ಎಂದರು.

ಲೋಕಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರು ವಿಶ್ವಾಸಮತ ಮಂಡಿಸಿ ದಾಗ, ನಿರ್ಣಯದ ಮೇಲೆ ಚರ್ಚೆ ನಡೆಸಿ ಮತಕ್ಕೆ ಹಾಕಲು ಹತ್ತು ದಿನ ತೆಗೆದು ಕೊ0ಡಿದ್ದರು ಎಂದು ವಿಶ್ವಾಸಮತ ವಿಳಂಬವಾಗುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ ಇನ್ನಷ್ಟು ವಿಳಂಬವಾಗುವ ಸೂಚನೆಯನ್ನು ಪರೋಕ್ಷವಾಗಿ ನೀಡಿದರು. ಶಾಸಕ ಶ್ರೀಮಂತ್ ಪಾಟೀಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದಾಗ ಪೆÇಲೀಸರು ಶ್ರೀಮಂತ್ ಪಾಟೀಲ್ ಅವರ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಳೆ ಎಲ್ಲದಕ್ಕೂ ಉತ್ತರ

ಬೆಂಗಳೂರು: ಸೋಮವಾರ ವಿಶ್ವಾಸಮತ ನಿರ್ಣ ಯದ ಮೇಲಿನ ಚರ್ಚೆ ಅಂತ್ಯವಾಗಲಿದೆ. ಅಂದು ಬಹುಮತ ಯಾರಿಗೆ ಇದೆ ಎನ್ನುವುದು ಸಾಬೀತಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್ ಬಳಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನಾವು ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವುದನ್ನು ವಿಳಂಬ ಮಾಡಿಲ್ಲ. ಸಂಸದೀಯ ನಡವಳಿಕೆಯಲ್ಲಿ ಕೆಲವು ಗೊಂದಲಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳುವುದು ನಮ್ಮ ಹಕ್ಕು. ಸೋಮವಾರ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು. ವಿಪ್ ಸಂಬಂಧ ಸುಪ್ರೀಂ ಕೋರ್ಟ್‍ನ ತೀರ್ಪಿನಲ್ಲಿ ಗೊಂದಲ ಉಂಟಾಗಿತ್ತು. ಇದೇ ವೇಳೆ ರಾಜ್ಯಪಾಲರ ಆದೇಶವೂ ಚರ್ಚಾಸ್ಪದವಾಗಿತ್ತು. ಈ ಎರಡೂ ವಿಚಾರಗಳ ಬಗ್ಗೆ ಸ್ಪಷ್ಟೀಕರಣ ಕೋರಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆಯ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು.

Translate »