ಮೈಸೂರು, ಮಾ.8(ಎಸ್ಬಿಡಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕೆಲ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಆಶ್ರಮದ ಶುಕವನ ಪಕ್ಷಿಧಾಮ, ಕಿಷ್ಕಿಂಧ ಮೂಲಿಕಾ ಬೋನ್ಸಾಯ್ ಗಾರ್ಡನ್ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯಕ್ಕೆ ಸೋಮವಾರದಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸ ಲಾಗಿದೆ. ಈ ಸಂಬಂಧ ಆಶ್ರಮದ ವೆಬ್ಸೈಟ್ನಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಪ್ರಕಟಿಸಲಾಗಿದೆ.
`ಕೊರೊನಾದಿಂದ ಉದ್ಭವಿಸುತ್ತಿ ರುವ ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಶುಕವನ, ಬೋನ್ಸಾಯ್ ವನ ಹಾಗೂ ವಿಶ್ವ ಮ್ಯೂಸಿಯಂಗಳನ್ನು ಮಾ.9ರಿಂದ ಮುಂದಿನ ಸೂಚನೆವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಪುನರಾರಂಭ ದಿನಾಂಕವನ್ನು ಜಿಚಿಛಿebooಞ.ಛಿom/sgsbiಡಿಜs’ ಮೂಲಕ ತಿಳಿಸಲಾಗುವುದು’ ಎಂದು ಸೂಚಿಸಲಾಗಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುವುದರಿಂದ ಹೀಗೆ ಜಾಗೃತೆ ವಹಿಸಲಾಗಿದೆ.
ಶ್ರೀಗಳ ಸಲಹೆ-ಸಂದೇಶ: ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಕ್ತರಿಗೆ ಸಂದೇಶ ನೀಡಿರುವ ಗಣಪತಿ ಸಚ್ಚಿದಾನಂದ ಶ್ರೀಗಳು, ಯಾರು ಮಾಸ್ಕ್ ಇಲ್ಲದೆ ಓಡಾಡಬೇಡಿ, ನಾವು ಶುಕವನ, ಬೋನ್ಸಾಯ್ ಮ್ಯೂಸಿಯಂ, ವಿಶ್ವಂ ಮ್ಯೂಸಿಯಂ ಮೂರು ಸ್ಥಳಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡುತ್ತಿದ್ದೇವೆ, ಇದನ್ನ ಹೇಳಲು ನಮಗೆ ಬೇಸರವಾಗುತ್ತಿದೆ. ಆದರೂ ಭಕ್ತರು ಹಾಗೂ ಪ್ರಾಣಿ ಪಕ್ಷಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ತಿಳಿಸಿದ್ದಾರೆ. ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಶ್ರಮಕ್ಕೆ ಬರುವ ಭಕ್ತರಿಗೆ ಮಾಸ್ಕ್ ನೀಡುವಂತೆ ಸೂಚಿಸಿದ್ದಾರೆ. ಆದರೆ ಶ್ರೀಗಳು ಮಾಸ್ಕ್ ಧರಿಸಿ, ದರ್ಶನ ನೀಡುತ್ತಿದ್ದಾರೆ ಎಂಬುದು ಸುಳ್ಳು. ಜನ ಹಾಗೂ ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.